Sunday, August 28, 2011

ಮೂಢನಂಬಿಕೆ ಗೆದ್ದಿತು!

 ಅಗಸ್ಟ್ ೨೮ ಅಮಾವಾಸ್ಯೆ, ಭಾನುವಾರ ೧೦ ಗಂಟೆ ಸುಮಾರಿಗೆ ಅಣ್ಣಾ ಹಜ಼ಾರೆ ಗುಟುಕು ಷರಬತ್ ಸ್ವೀಕರಿಸುವುದರೊಂದಗೆ ಗೆದ್ದಿದ್ದು ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವ್ಯಾಪೀ ಆಂದೋಳನವಲ್ಲ, ಸತ್ಯ-ಧರ್ಮಗಳಲ್ಲ, ದೇಶದ ಆತ್ಮಸಾಕ್ಷಿಯೂ ಅಲ್ಲ. ಅದು ಕೇವಲ ಮೂಢನಂಬಿಕೆ!
 ರಾಜಕೀಯದ ಬ್ಲಾಕ್‌ಮೇಲಿಗಂಜಿ ಪಾರ್ಲಿಮೆಂಟ್ ತರಾತುರಿಯಲ್ಲಿ, ಜನಲೋಕಪಾಲವೆಂಬ ಮಸೂದೆಗೆ ಹೂಂಗುಟ್ಟಿದೆ. ಅದು ಇನ್ನೂ ಪರಿಷ್ಕಾರಗೊಂಡು, ಕಾಯ್ದೆ-ಕಾನೂನಿನ ಕರಡು ಸಿದ್ಧವಾಗಿ, ಲೋಕಸಭೆ-ರಾಜ್ಯಸಭೆಗಳಲ್ಲಿ ಪಾಸಾಗಿ ರಾಷ್ರ್ಟಪತಿಗಳ ರುಜು ಪಡೆದು ತಜ್ಞರಿಂದ ಕಾನೂನು-ಕಲಮುಗಳನ್ನಂಟಿಸಿಕೊಂಡು ಜಾರಿಯಾಗುವ ಹೊತ್ತಿಗೆ, ಈಗ ಜೈಕಾರ-ಧಿಕ್ಕಾರಗಳನ್ನು ಹಾಕಿದ ಉತ್ಸಾಹಿಗಳು ಅದನ್ನೆಷ್ಟು ನೆನಪಿಟ್ಟುಕೊಂಡಿರುತ್ತಾರೋ? ಗೊತ್ತಿಲ್ಲ!
 ಭ್ರಷ್ಟಾಚಾರದಿಂದಾಗಿ ಇಡೀ ರಾಷ್ಟ್ರ ಸಮುದಾಯವೇ ಬೇಸತ್ತುಹೋಗಿದೆ ಎನ್ನುವುದೆನೋ ಈ ಅಭೂತಪೂರ್ವ ಆಂದೋಳನದಿಂದ ಧೃಢಪಟ್ಟಿದೆ. ಜನ ಯಾವುದೇ ’ಇಸಂ’ ಮತ್ತು ಆಸಾಮಿಗಳಲ್ಲೂ ನಂಬಿಕೆ ಕಳೆದುಕೊಂಡಿದ್ದಾರೆನ್ನುವುದೂ ಸಾಬೀತಾಗಿದೆ. ಆದರೂ ಧೂರ್ತ ರಾಜಕಾರಣಿಗಳು ಜನಲೋಕಪಾಲದ ಬೆದರುಬೊಂಬೆಗಂಜಿ ಸಭ್ಯರಾಗಿಬಿಡುತ್ತಾರೆಂದು ನಂಬುವುದು ಬಾಲಿಶವೇ ಆಗುತ್ತದೆ!
 ಉಪಾಸದಿಂದ ಕುಗ್ಗಿದ ದನಿಯಲ್ಲಿ ಅಣ್ಣಾ ಕೊಟ್ಟ ಧೀಮಂತ ಕರೆಯಾದರೂ ಏನು? ’ಜನಲೋಕಪಾಲ ಮಸೂದೆ ವಿರೋಧಿಸುವವರನ್ನು ಮತ್ತೆ ಆರಿಸಬೇಡಿ’ ಎಂದು. ಈಗ ಮಸೂದೆ ಸರ್ವಾನುಮತದಿಂದ ಪಾಸಾಗಿದೆ; ಈಗಿನವರೆಲ್ಲರೂ ಪುನರಾಯ್ಕೆಗೆ ಅರ್ಹರೇ. ರಾಜಾಗಳು, ಕಲ್ಮಾಡಿಗಳು, ಕನ್ನಿಮೊಳಿಗಳೂ ಸಹ!
 
 ಪಾರ್ಲಿಮೆಂಟಿನಲ್ಲಾಗಲೀ, ಶಾಸನಸಭೆಗಳಲ್ಲಾಗಲೀ ವೊಟ್ ಹಾಕುವ ಜನತೆಯ ನಿಜವಾದ ಬಹುಮತದ ಪ್ರಾತಿನಿಧ್ಯವಾಗದಿರುವುದು ಭ್ರಷ್ಟಾಚಾರದ ಮೂಲಕಾರಣ. ಅದನ್ನು ಸುಧಾರಿಸದೆ, ಯಾರೋ ಸರ್ವಾಧಿಕಾರಿ ಬಂದು ಲಂಚಕೋರರನ್ನು ಗಲ್ಲಿಗೇರಿಸಲಿ ಎಂದು ಬಯಸುವುದು ರಾಷ್ಟ್ರೀಯ ಮೂಢನಂಬಿಕೆ!

Monday, August 8, 2011

ರಾಯರ ಆರಾಧನೆಗೊಂದು Dress-code ಮನವಿ

ಗುರು ರಾಘವೇಂದ್ರ ಸಾರ್ವಭೌಮರ (ಹಾಗೆಂದು ನಾಡಾಡೀ ಭಾವುಕ ಭಕ್ತರು ಕರೆಯುತ್ತಾರೆ; ಇದರ ಸದರ್ಥ ವಿವರಣೆಯಿರಲಿ, ರಾಯರ ಬಗ್ಗೆಯೇ ನೈಜ ಗೌರವ ಉಂಟುಮಾಡುವ ಯಾವ ಗೋಜಿಗೂ “ವಿದ್ವಾಂಸರು” ಹೋಗುವುದಿಲ್ಲ!) ಆರಾಧನೆ ಇನ್ನೇನು ಬಂದೇಬಿಟ್ಟಿದೆ. ಕಾಮಧೇನು, ಕಲ್ಪವೃಕ್ಷ, ಅಪೇಕ್ಷಿತ ಪ್ರದಾತರೆಂಬೆಲ್ಲಾ ಪ್ರಭಾವಳಿಯನ್ನು ಆ ಮಹನೀಯರ ಸುತ್ತಾ ಹಬ್ಬಿ ಹರಡಿಸಲಾಗಿದೆ. ಊರೂರ ಕೇರಿ-ಕೇರಿ “ಮಠ”ಗಳಲ್ಲಿ ಬ್ಯಾನರ್ ತೂಗುಕಟ್ಟಿ ಭರ್ಜರಿ Collection ಮಾಡಲಾಗುತ್ತಿದೆ. ಮಾಡಿಕೊಳ್ಳಲಿ; ಬೇಡವೆನ್ನುವುದಿಲ್ಲ. ಆದರೆ ಉದ್ಧರಣೆ ತಿಳಿ ಪಂಚಾಮೃತ, ಚಮಚೆ ಹಯಗ್ರೀವ ಸೇವನೆ ಮಾತ್ರದಿಂದ ತಮ್ಮ  ಜನ್ಮ-ಜನ್ಮಾಂತರದ ಪಾಪಗಳು ತೊಡೆದುಹೋಗುತ್ತದೆಂದುಕೊಳ್ಳುವ ಮುಗ್ಧರ ಬಗ್ಗೆ “ಪಾಪ”  ಎನಿಸುತ್ತದೆ! ರಾಯರ ಗುರು-ಗುರು-ಗುರುವರೇಣ್ಯರ ಮೂಲ ಗುರುಗಳ “ಕುರು-ಭುಂಕ್ಷ್ವ” ಮತ್ತು “ಹರಿಪಾದ ವಿನಂಮ್ರತಾ”  “ಸತ್ಯ”ವನ್ನು, ಸಂದರ್ಭಕ್ಕೆ ತಕ್ಕಂತೆ ಜಾತ್ಯತೀತವಾಗಿ ಜನತೆಗೆ ಮನದಟ್ಟು ಮಾಡಿಸುವ ವೈಶಾಲ್ಯತೆ, ಪಂಡಿತೋಮೋತ್ತಮರಲ್ಲಿ ಕಂಡುಬರುವುದಿಲ್ಲ; ಅವರವರ ಬೆಳ್ಳಿ ಚೊಂಬು, ಪಂಪಾತ್ರೆ-ಉದ್ಧರಣೆ, ಪಟ್ಟೆ ಜರತಾರಿ ಧೋತ್ರ ಜೋಡಿಯ “ಅಲಂಕಾರ”ದ ಚಿಂತೆಯಲ್ಲವರಿರುತ್ತಾರೆ!
ಅದು ಹೇಗಾದರಾಗಲಿ; ಅವರವರ “ಪಾಪಪ್ರಜ್ಞೆ”ಗೆ ಬಿಟ್ಟ ವಿಚಾರ. ಈ ಸಂದರ್ಭದಲ್ಲಿ ಒಂದು ವಿನಮ್ರ ಮನವಿ. ಅದು ಯತಿತ್ವದ ಯತಿ ಆಶಿರ್ವಾದದ ಮಹತ್ವ ಕಪಾಡುವ ಬಗ್ಗೆ. ಜಪತಪಾನುಷ್ಠಾನ ನಿರತ ಯತಿ-ಯೋಗಿಗಳು ಸದ್ಗೃಹಸ್ಥರ ಸದಾಚಾರಕ್ಕೆ ಮೆಚ್ಚಿ, ತಾವು ಉಪಯೋಗಿಸಿದ ಕಾವಿವಸ್ತ್ರ ಹೊದೆಸುತ್ತಿದ್ದ ಕಾಲವಿತ್ತು. ಇದಕ್ಕೆ “ಶೇಷವಸ್ತ್ರ” ಎಂಬ ಮಹತ್ವ ಕೊಡಲಾಗುತ್ತಿತ್ತು. ಯತಿವರೇಣ್ಯರ ಭಿಕ್ಷಾ-ಪಾದಪೂಜಾ ಸಂದರ್ಭದಲ್ಲಿ, ಉತ್ತಮ ಹತ್ತಿ ಬಟ್ಟೆಯ ದಟ್ಟಿ ಮತ್ತು ಹೊದೆವಸ್ತ್ರವನ್ನು ಕೆಮ್ಮಣ್ಣಿನ ಕಾವಿಯಲ್ಲಿ ನೆನೆಸಿ ಮಡಿ ಮಾಡಿ ನಿವೇದಿಸುವ ಶ್ರದ್ಧೆ ಹಿಂದೆಲ್ಲಾ ಇತ್ತು. ಈಗಲಾದರೊ ಮಿರಿ-ಮಿರಿ ಮಿಂಚುವ ಕೃತಕ ಕನಕಾಂಬರ ವಸ್ತ್ರ-ಧೋತ್ರಗಳು ಎಲ್ಲಾ ಸೀರೆಯಂಗಡಿಗಳಲ್ಲೂ ಸಿಕ್ಕುತ್ತವೆ. ಅಂಥವುಗಳನ್ನೇ ತಂದು ಮುರಿಗೆ ಹಿಡಿದು ಕೊಡುವುದೇ ಇಂದಿನ ಪರಿಪಾಠ. ಅದನ್ನು “ಸ್ವಾಮಿಗಳು” ಉಟ್ಟು ಮರೆಯುತ್ತಾರೆ ಸಹ. ಭಾರೀ ಮೊತ್ತದ ಸೇವೆ ಮಾಡಿಸುವ ಭಕ್ತಾದಿಗಳಿಗೆ ಅಗ್ಗದ “ಪೊನ್ನಾಡೆ” ಹೊದ್ದಿಸಿ ಮರ್ಯಾದೆ ಮಾಡುವುದೂ ಈಗ ಚಿಕ್ಕ-ಪುಟ್ಟ ಗುಡಿಗಳಲ್ಲೂ ರೂಢಿಯಾಗಿದೆ. ಹೋಗಲಿ, ಅದಕ್ಕೂ “ಶೇಷವಸ್ತ್ರ”ದ ಗೌರವವನ್ನೇ ಕೊಡೋಣ.
ಆದರೆ ಸಿಲ್ಕ್ ಸೀರೆಯಂಥಾ ಪೀತಾಂಬರಗಳನ್ನು ಗೃಹಸ್ಥರೂ, ವಟುಗಳೂ, ಮಕ್ಕಳೂ ಸೊಂಟದ ಕೆಳಗೂ ಸುತ್ತಿಕೊಂಡು, ಮಠಗಳಲ್ಲೂ ಆರಾಧನೆಗಳಲ್ಲೂ ಸರ-ಪರ ಓಡಾಡುವುದು ಜಿಗುಪ್ಸೆ ತರುತ್ತದೆ. ಕೆಲ ಸಂದರ್ಭಗಳಲ್ಲಂತೂ “ಶ್ರೀಪಾದರು” ಯಾರು, ಸೇವಕರು ಯಾರು, ಆಢ್ಯತೆಯ ಆಡಂಬರದ “ಗೃಹಸ್ಥ ಯಜಮಾನರು”ಗಳು ಯಾರು ಎಂದು ಗುರ್ತಿಸುವುದೂ ಕಷ್ಟವಾಗಿಹೋಗುತ್ತದೆ!
ಆದ್ದರಿಂದ ಯತಿ, ಸಂನ್ಯಾಸಿ, ಪೀಠಾಧಿಪತಿಯಲ್ಲದವರು ಕಾಷಾಯ ಅಥವಾ ಇತರ “ಹೆಂಗಸರ ಬಣ್ಣ”ದ ಧೋತ್ರಗಳನ್ನುಡದೆ ಸರಳ ಪಂಚೆಯ ಕಚ್ಚೆ ಅಥವಾ ಎರಡು ಮಡಿಕೆ ದಟ್ಟಿಯನ್ನುಟ್ಟು ಸಂಭ್ರಮಿಸಿ, ಸಹಕರಿಸಿಸದರೆ, ಯತಿ ಮರ್ಯಾದೆ ಕಾಪಾಡಿದಮತಾಗುತ್ತದೆಂದು ಒಂದು ವಿನಂಮ್ರ ಅರಿಕೆ!

Friday, August 5, 2011

’ಬಲಿಷ್ಠ ಲೋಕಪಾಲ’ - ಯಾವ ಅರ್ಥದಲ್ಲಿ?

                 ದೇಶದಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಬಲಿಷ್ಠ ಲೋಕಪಾಲಬೇಕೆಂಬುದು ಬಹುಮಂದಿ ಮುಗ್ಧರ ಅಶಯ  ಆದರಿದು ಕುರುಡು ನಂಬಿಕೆ. ಹಾಗೆಂದು ಬಿಡಿಸಿ ಹೇಳಿದರೂ ಯಾರೂ ಏಕೆ ನಂಬದಿರುವುದು ದುರ್ದೈವ!

                ಬಲಿಷ್ಠ ಲೋಕಪಾಲದ ಆಸೆ ಬಾಲಿಶ. ಪರೋಕ್ಷವಾಗಿ ಇದು, ’ಮಿಲಿಟರಿ ದಂಡನಾಯಕನೊಬ್ಬ ದೇಶವನ್ನಾಳಲಿಎಂಬ ಬಯಕೆಯೇ ಆಗುತ್ತದೆ!

                ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಬೊಬ್ಬೆ ಹಾಕುವ ಅಣ್ಣಗಳ್ಯಾರೂ ದೇಶದ ಪ್ರಜಾಸತ್ತೆಯ ಬೇರುಗಳನ್ನು ಬಲಪಡಿಸುವತ್ತ ಆಲೋಚಿಸುತ್ತಿಲ್ಲ; ಬದಲಿಗೆ ಪ್ರಜಾಸತ್ತೆ ಹೆಸರಿನಲ್ಲಿ ದರೋಡೆ ಮಾಡುತ್ತಿರುವ ತಲೆಹಿಡುಕರ ವಿರುದ್ಧ ಸಾತ್ವಿಕ ರೋಷದ ಜ್ವಾಲೆ ಎಬ್ಬಿಸಿ ಅದರಲ್ಲಿ ಕಾಗದದ ತುಂಡುಗಳನ್ನು ಸುಟ್ಟುಹಾಕುತ್ತಿದ್ದಾರೆ, ಅಷ್ಟೆ!

                ನಮ್ಮ ಶಾಸನಸಭೆಗಳು ಮತ್ತು ಸಂಸತ್ತು, ಅವುಗಳು ಮುಂದುಮಾಡುವ ಮುಖ್ಯಮಂತ್ರಿ - ಪ್ರಧಾನ ಮಂತ್ರಿ ಮತ್ತವರ ಸಂಪುಟಗಳೇ ನಿಜವಾದ ಅರ್ಥದಲ್ಲಿ ಲೋಕಪಾಲ ಅಂದರೆ ಪ್ರಜೆಗಳನ್ನು ರಕ್ಷಿಸುವವರು ಆಗಬೇಕು. ಅವರಮೇಲಿನ್ನೊಬ್ಬನೆಂದರೆ ಅದು ಒಬಾಮನೋ, ಒಸಾಮನೊ ಆಗಬೇಕಷ್ಟೆ!

                ರಾಜಾಗಳು, ಕಲ್ಮಾಡಿಗಳು, ಯಡಿಯೂರಪ್ಪಾದಿಗಳೆಲ್ಲಾ ಪ್ರಸ್ತುತ ವ್ಯಾಖ್ಯೆಯಲ್ಲಿ ಪ್ರಜಾಪ್ರನಿಧಿಗಳೇ! ಇವರು ನಡೆಸಿರುವ ಆಡಳಿತವೆಲ್ಲಾ ಜನಾದೇಶದ ಮೇರೆಗೇ! ಆದರದು ಎಷ್ಟು ಜನರ ಆದೇಶಎಂದು ಯಾರಾದರೂ ಗಂಭೀರವಾಗಿ ಲೆಕ್ಕ ಹಾಕಿದ್ದಾರೆಯೇ? ದೇಶದ ಶಾಸನಸಭೆಗಳಾಗಲೀ, ಸಂಸತ್ತಾಗಲೀ ಓಟು ಹಾಕಿದವರ ಸರಾಸರಿ ಎಷ್ಟು ಪ್ರತಿಶತವನ್ನು ಪ್ರತಿನಿಧಿಸುತ್ತವೆ? ಅದರಲ್ಲಿ ಪಕ್ಷಗಳು, ಅವುಗಳಲ್ಲೂ ಭಿನ್ನಮತ-ಗುಂಪುಗುಳಿತನ! ಇದೆಂಥಾ ಜನಾದೇಶ? ಯಾವರ್ಥದಲ್ಲಿ ಪ್ರಜಾಪ್ರಭುತ್ವ?

                ಸಂಸತ್ತು/ಶಾಸನಸಭೆಗಳು ಕಡ್ಡಾಯವಾಗಿ ಕನಿಷ್ಠ ಶೇ. ೫೦ರಷ್ಟು  ಪ್ರಜ್ಞಾವಂತ ಮತದಾರರನ್ನಾದರೂ ಪ್ರತಿನಿಧಿಸಬೇಕು. ಹಾಗಾದಾಗ ಅವು, ತಾವೇ ಜವಾಬ್ದಾರಿಯುತವಾಗಿ ವರ್ತಿಸಬೇಕಾದ್ದು ಅನಿವಾರ‍್ಯವಾಗುತ್ತದೆ. ನಮ್ಮ ಒತ್ತಾಯ, ಆಂದೋಳನ, ಉಪವಾಸಗಳು ಈ ನಿಟ್ಟಿನಲ್ಲಾದರೆ ಸಾಧುವಾದಿತು.

Friday, April 22, 2011

ಲೋಕಪಾಲ ಮಸೂದೆ; ನಾಗರಿಕ V/s ಅನಾಗರಿಕ ಸಮಾಜ

                ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ನ್ಯಾ. ಸಂತೋಷ ಹೆಗಡೆ ಹೊರಬರುತ್ತೇನೆಂದ ’ಅ’ ಸಂತೋಷಕ್ಕೆ ನಾಗರಿಕ ಸಮುದಾಯದ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯವರ ಸಾತ್ವಿಕತೆಗೆ ಬೆಚ್ಚಿಬಿದ್ದು, ಸರಕಾರ, ಜನಲೋಕಪಾಲ ಮಸೂದೆ ರಚನೆಗೆ ಹೂಂಗುಟ್ಟಿದರೂ, ಈ ಬಗ್ಗೆ ಅಪಸ್ವರ-ಅಪಶೃತಿಗಳು ಆದಿಯಿಂದಲೇ ಕೇಳಿಸುತ್ತಿದೆ. ಕರಡು ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೂ, ಮೂವರು ಕೇಂದ್ರ ಸಚಿವರೂ ಇರುತ್ತಾರೆಂಬ ಪರಿಕಲ್ಪನೆಯೇ ಹಾಸ್ಯಾಸ್ಪದ! ಹೀಗೆಂದರೆ, ಸಚಿವರು ನಾಗರಿಕ ಸಮಾಜದವರಲ್ಲ ಎಂಬ ಸತ್ಯಸ್ಯ ಸತ್ಯವನ್ನು, ತಿಳಿದೋ ತಿಳಿಯದೆಯೋ ಒಪ್ಪಿಕೊಂಡಂತಾಗಲಿಲ್ಲವೇ?!
                ನ್ಯಾಯವಿದ ಹೆಗ್ಡೆಯವರೂ, ನ್ಯಾಯವಾದಿ ಭೂಷಣದ್ವಯರೂ, ಹಜಾರೆಯವರಂತಹ ಪ್ರಾಮಾಣಿಕರೂ, ಅಗ್ನಿವೇಶರಂತಹ ಋಷಿ ಸಮಾನರೂ ಲಂಚ ವಿರೋಧದ ಮುಂಚೂಣಿಯಲ್ಲದ್ದರೂ ಸಮರ್ಪಕ ಮಸೂದೆಯೊಂದು ಸಿದ್ಧವಾಗಿ ಅದು ಹಾಗೇ ಕಾಯ್ದೆಯಾದೀತೆಂಬ ನಿರೀಕ್ಷೆ ಸುತರಾಂ ಬೇಡ! ಸಂಸತ್ತು ಅದನ್ನು ತನ್ನದೇ ಸ್ವಹಿತದ ಉದ್ದೇಶದಿಂದ ಒಪ್ಪುವುದಿಲ್ಲವಷ್ಟೇ ಅಲ್ಲ, ಪ್ರಜಾತಂತ್ರದ ಹಿತದೃಷ್ಟಿಯಿಂದಲೂ ಇಂಥದು ಸಮರ್ಥನೀಯವಾಗುವುದಿಲ್ಲ!
                ಲಂಚಗುಳಿತನದ ಕೂಪವಾಗಿವೆ ಎಂದು ನಮ್ಮ ಕೆಂಗಣ್ಣಿರುವುದು, ಆರ್‌ಟಿಓ, ಸಬ್‌ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಸರಕಾರೀ ಕಾರ‍್ಯಾಲಯಗಳ ಮೇಲೆ. ಆದರೆ ಅಲ್ಲಿರುವುದು ಭ್ರಷ್ಟಾಚಾರದ ಬೇರು ಅಲ್ಲವೇ ಅಲ್ಲ! ನಿಜವಾಗಿ ಅದಿರುವುದು ಜಾತಿವಾದ, ಕೋಮುವಾದ, ಮನುವಾದ, ನಕ್ಸಲ್‌ವಾದ ಇತ್ಯಾದಿ ಇತ್ಯಾದಿ ರಾಜಕೀಯ ಭಾಷಣದ ಕ್ಲೀಷೆಗಳಲ್ಲಿ; ಛದ್ರೀಕರಣ, ತುಷ್ಟೀಕರಣ ರಾಜನೀತಿಯಿಂದ ಹಾಕಿಕೊಳ್ಳುವ ವೋಟ್ ಬ್ಯಾಂಕ್ ಬೇಲಿಗಳಲ್ಲಿ; ಇಂತಹ ಕೇವಲ 20-25 ಪ್ರತಿಶತ ಪ್ರಾತಿನಿಧ್ಯವಿರುವ ಪಾರ‍್ಲಿಮೆಂಟ್ ಅಥವಾ ಅಸೆಂಬ್ಲಿ ಇಡೀ ದೇಶದ, ರಾಜ್ಯದ ಪರುಪತ್ತೆ ನಡೆಸುವ ಪ್ರಜಾಸತ್ತೆಯ ದುರಂತದಲ್ಲಿ! ಇದು ನಿಚ್ಚಳ ಮತ್ತು ಸುಸ್ಪಷ್ಟ! ಆದರೂ ಪತ್ರಿಕೆಗಳನ್ನೂ ಒಳಗೊಂಡ ಮಾಧ್ಯಮಗಳೂ ಸೇರಿದಂತೆ, ಬಹುತೇಕ ವ್ಯವಸ್ಥೆಗಳು  ಇದರದೇ ಫಲಾನುಭವಿಗಳು! ಅವುಗಳ ಜಾಣ ಕುರುಡಿಗೆ ಇದು ಕಾಣಿಸುವುದಿಲ್ಲ; ಜಾಣ ಕಿವುಡಿಗೆ ಇಂಥಾ ಮಾತುಗಳು ಕೇಳಿಸುವುದಿಲ್ಲ!   

Tuesday, April 12, 2011

"ಕುಮಾರ" ಹೇಳಿಕೆಯಲ್ಲಿ "ಕೌಮಾರ‍್ಯ"ಕ್ಕೆ ಮೀರಿದ "ಪ್ರೌಢತೆ"!

                ಭ್ರಷ್ಟಾಚಾರದ ಸಂಬಂಧ, ಮಹಾತ್ಮಾ ಗಾಂಧೀಜಿ ಹೆಸರನ್ನುಲೇಖಿಸಿದ ಬಾಲಿಶ ಅಧಿಕಪ್ರಸಂಗವನ್ನು ಬಿಟ್ಟರೆ, ತರುಣ ನಾಯಕ ಕುಮರಸ್ವಾಮಿಯವರ ಹೇಳಿಕೆ, ಉಳಿದಂತೆ ಅತ್ಯಂತ ಪ್ರಬುದ್ಧವಾಗಿಯೇ ಇದೆ! ರಾಜಕೀಯದ ಚಿಂದಿ ಹೆಕ್ಕುವ ಪುಢಾರಿಗಳೇನೋ ಸಹಜವಾಗಿ ಚಿಲ್ಲರೆ ಮಾತಾಡಿಕೊಳ್ಳುತ್ತಾರೆ; ತಟಸ್ಥ ಬುದ್ಧಿಜೀವಿಗಳಾದರೂ ಇದನ್ನು ಪ್ರೌಢವಾಗಿ ತೆಗೆದುಕೊಳ್ಳಬೇಕಗಿದೆ!
                ಈ ಚರ್ಚೆ ಹಿನ್ನೆಲೆ, Corruption ಎಂಬ ಮಾತು. ಈ ಶಬ್ದದ ನಿಘಂಟಿನ ಅರ್ಥ, ಕಾಸಿನ ಅಥವಾ ನೋಟು ತೆಕ್ಕೆಗಳ, ಬ್ಯಾಂಕ್ ಬ್ಯಲೆನ್ಸಿನ ಲಂಚಕ್ಕೆ ಸೀಮಿತವಲ್ಲ; ಕೊಳೆತು ನಾರುವ ಹದಗೆಟ್ಟತನವನ್ನೂ, ವ್ಯವಸ್ಥೆಯ ಶೇಪುಗೇಡೀತನವನ್ನೂ ಅದು ಸೂಚಿಸುತ್ತದೆ. ಅದು ಭಟ್ಟಿಯಾಗುತ್ತಿರುವ ಅಮಲಿನ ಮೂಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಚೇರಿಯ ಜವಾನ, ಗುಮಾಸ್ತ, ಮ್ಯಾನೇಜರು, ಸಾಹೇಬರುಗಳ ಮೇಜು, ಕಪಾಟು, ಲಾಕರುಗಳ ಜಾಲಾಟವನ್ನು ಉನ್ನತೀಕರಿಸಹೋಗುವುದು, ‘ಹೆಂಡದ ಮಡಕೆಯ ಹೊರಗೆ ತೊಳೆದಂತೆ ಆಗದೇ?
ಭ್ರಷ್ಟಾಚಾರ ಕುರಿತಂತೆ, ಮಾಜಿ ಮುಖ್ಯಮಂತ್ರಿ, ಪಕ್ಷದ ಹಾಲೀ ರಾಜ್ಯಾಧ್ಯಕ್ಷ ಎಚ್ಕೆಡಿಯವರು ತಳಿದೋ, ತಿಳಿಯದೆಯೋ ಹೇಳಿಬಿಟ್ಟಿರುವ ವಾಚ್ಯಾರ್ಥದ ಲಕ್ಷಣಕ್ಕೆ, ನಮ್ಮ ಪ್ರಸಕ್ತ ರಾಜಕೀಯ ವಿದ್ಯಮಾನ ಬೇಕಾದಷ್ಟೇ ಲಕ್ಷ್ಯ ಒದಗಿಸೀತು. ದಿನ-ನಿತ್ಯದ ಜಾತಿ ರಾಜಕಾರಣ, ಹಸಿಸುಳ್ಳುಗಳ ಓಲೈಕೆ ಮಾಲಿಕೆ, ಅರ್ಥವಾಗಲೀ, ಭಾವವಾಗಲೀ ಇಲ್ಲದ ಮೀಸಲಾತಿ ಪದ್ಧತಿಗಳಲ್ಲಿ ಯಾವ ಪ್ರಾಮಾಣಿಕತೆಯಿದೆ? ನಡೆಯುತ್ತಿರುವ ಗುಪ್ತ ಮತಾಂತರದಲ್ಲಾಗಲೀ, ನಡೆಯುತ್ತಿದೆ ಎಂಬ ಉತ್ಕಟ ಹೋರಾಟದಲ್ಲಾಗಲೀ, ಆ ಹೆಸರಿನಿಂದಲೋ ಮತ್ತೊಂದು ನೆಪದಿಂದಲೋ, ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ಬೇಳೆ ಬೇಸಿಕೊಳ್ಳು ಹಿತಾಸಕ್ತಿಗಳಲ್ಲಾಗಲೀ ಯಾವ ಪಾರಲೌಕಿಕ ಮೌಲ್ಯ ಹೊಳೆದುಹೋಗುತ್ತಿದೆ?
ಹಜಾರೆಯವರಂಥಾ ಅಣ್ಣಗಳು, ಸಾಧ್ಯವಾದರೆ, ಪ್ರಾಮಾಣಿಕವಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲಿ; ತುಂಡು-ಬಾಡಿನ ಸಾಕು ನಾಯಿಗಳಿಂದಷ್ಟೇ ಅಲ್ಲದೆ ಗೆಲ್ಲುವ ಅಭ್ಯರ್ಥಿಗೆ, ಎಲ್ಲಾ ಜಾತಿ-ಮತ, ಭಾಷೆ, ಕೋಮುಗಳ ಜನರ ವೋಟೂ ಅನಿವಾರ‍್ಯವಾಗುವ ಸನ್ನಿವೇಶವನ್ನುಂಟು ಮಾಡಲಿ. ಅಗ ಪ್ರಜಾಪ್ರಭುತ್ವ ಅವರಿಗೆ ಚಿರ ಋಣಿಯಾದೀತು!

Sunday, April 10, 2011

ಭಲೆ, ಕುಮಾರಸ್ವಾಮಿ! ಭೇಷ್! ಭಲೆ


                ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಮಾನಿ ನಾನಲ್ಲ; ಅವರ ಪಕ್ಷದ ಅನುಕಂಪಿಯೂ ಅಲ್ಲ. ಆದರೂ ಏ. 10ರ ಅಪರಾಹ್ನದ ಇ-ಟಿವಿ ಸುದ್ದಿ ನನ್ನನ್ನು ಚಿಕಿತಗೊಳಿಸತು. ವಿಸ್ಮಯದಿಂದ ಸುಧಾರಿಸಿಕೊಂಡನಂತರ ಅದು ಇದನ್ನು ಅಕ್ಷರಿಸುವ ಪ್ರೇರಣೆಯಾಯಿತು!
ರಾಜಕೀಯವೆನ್ನುವುದರಲ್ಲಿರಬಹುದಾದ ಕೊಚ್ಚೆ-ಕೆಸರುಗಳು ಒತ್ತಟ್ಟಿಗಿರಲಿ, ಅವರು ಆಗ ಹುಬ್ಬಳ್ಳಿಯಲ್ಲಿ ಅಂದ ಮಾತು ರಾಜಕೀಯಾತೀತವಾಗಿ ಅಭಿನಂದನಾರ್ಹವೆನಿಸಿತು.
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲ’ ಎಂಬ ವಿದ್ಯಮಾನದ ಸತ್ಯವನ್ನು ಸಾರ್ವಜನಿಕರಿಗೆ ಬಿಡಿಸಿಹೇಳಿದ ಆ ’ಗಂಡಸುತನ’ ಪ್ರಮಾಣಿಕವಾಗಿಯೂ ಸಂತೋಷ ತಂದಿತು.
                ಆಳವಾದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಜಾಗೃತಿ ಹುಟ್ಟಿಸಿದ್ದು ಅಣ್ಣಾ ಹಜಾರೆಯವರ ಸತ್ಸಾಧನೆಯೆನ್ನುವುದರಲ್ಲಿ ವಿವಾದವಿಲ್ಲ. ಆದರೆ ಇದು ಭ್ರಷ್ಟಾಚಾರದ ವಿರುದ್ಧ ರಣಕಹಳೆ ಎಂದು ಬೀಗುವವರ ಬಗ್ಗೆ ಮರುಕವಾಗುತ್ತದೆ!
                ಲೋಕಪಾಲ ಮೂಸೂದೆ ಬರೆಯುವ ಕಾಯ್ದೆ ಪಂಡಿತರ ಪ್ರತಿಭೋತ್ಸಾಹದ ಪದಾಕ್ಷರಗಳ ಬಿಗಿಕಟ್ಟಿನಿಂದ ಮಾತ್ರವೇ ದೇಶದ ಸಾರ್ವಜನಿಕ ಜೀವನ ಭ್ರಷ್ಟಾಚಾರದ ಕೊಳೆ-ಕೆಸರಿನಿಂದ ಮುಕ್ತವಾಗಿಬಿಡುತ್ತದೆಂದುಕೊಳ್ಳುವುದು ಅತ್ಯಂತ ಅಸಂಭವ. ಇದು ಭ್ರಮಾಲೋಕ. ನಮ್ಮ ಈ ಭ್ರಮಾಲೋಕಕ್ಕೆ ಕಾರಣ, ಭ್ರಷ್ಟಾಚಾರವೆನ್ನುವುದರ ಬಗ್ಗೆ ನಮ್ಮ ಬಾಲಿಶ ಪರಿಕಲ್ಪನೆ! ಭ್ರಷ್ಟಾಚಾರವೆಂದರೆ, ಚಿಲ್ಲರೆ ಕಾಸಿನಿಂದ ಆರಂಭವಾಗಿ ಲೋಕಾಯುಕ್ತರು ಹಿಡಿದುಹಕುವ ನುರಾರು ಕೋಟಿ ಅಕ್ರಮ ಸಂಭಾವನೆ; ಅದಕ್ಕೆ ತಕ್ಕ ಶಿಕ್ಷೆಯಾಗುವ ವ್ಯವಸ್ಥೆಯಾದರೆ ಸಾಕು ಎಂದು ನಾವಂದುಕೊಂಡುಬಿಟ್ಟಿದ್ದೇವೆ. ಆದರೆ ನಮ್ಮ ಕಣ್ಣೆದುರಿಗೇ ರಾಜಾರೋಷವಾಗಿ ನಡೆಯುವ ಜಾತಿ ರಾಜಕಾರಣ, ಸುಳ್ಳು-ಸುಳ್ಳು ಓಲೈಕೆ, ಅರ್ಥವಿಲ್ಲದ-ಭಾವವಿಲ್ಲದ ಮೀಸಲಾತಿ ಪದ್ಧತಿ ಇವೆಲ್ಲಾ ಔಟ್ ಅಂಡ್ ಔಟ್ ಭ್ರಷ್ಟಾಚಾರವಲ್ಲವೇ; ಮಿಥ್ಯಾಚಾರವಲ್ಲವೇ? ಮತಾಂತರವಾಗಲೀ, ಅದರ ವಿರುದ್ಧ ಉಕ್ಕಟ ಹೋರಾಟವಾಗಲೀ ನಡೆಯುವುದೇಕೆ? ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ನಿರ್ದಿಷ್ಟ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಇದನ್ನೆಲ್ಲಾ ಒಂದೇ ಮಾತಿಮಲ್ಲಿ “ರಾಜಕೀಯ” ಎಂದು ವರ್ಣಿಸಲಾಗುವುದಿಲ್ಲವೇ? ಇದು ಅವ್ಯಾಹತವಾಗಿದ್ದುಕೊಂಡಿರುವ ತನಕ, ಸಾರ್ವಜನಿಕ ಜೀವನ ನೆಮ್ಮದಿ ಕಾಣುವುದಾದರೂ ಸಾಧ್ಯವೇ?  
                ಇದಕ್ಕೆ ಪರಿಹಾರವೆನ್ನುವುದೇ ಇಲ್ಲವೆಂದಲ್ಲ. ಅದು ಅತ್ಯಂತ ದುರ್ಲಭವೂ ಅಲ್ಲ. ಆ ಸರಳ ಪರಿಹಾರ ಪ್ರಜಾಪ್ರತಿನಿಧಿ ಕಾಯ್ದೆಯ ಮಾನವಂತಿಕೆಯಲ್ಲಿದೆ! ನಿಜವಾದ ಬಹುಮತ ಪ್ರತಿನಿಧಿಗಳು - ಚಲಾಯಿತ ಅರ್ಹ ಮತದ ಶೇ. 50+ ಪಡೆದವರು - ಮಾತ್ರಾ ಸಂಸದರು/ಶಾಸಕರಾಗುವಂತೆ ಕಡ್ಡಾಯ ಮಾಡಿದರೆ ಸಾಕು. ಈ ಹುಚ್ಚುಚ್ಚಾರಗಳಿಗೆ ತಂತಾನೇ ಕಡಿವಾಣ ಬೀಳುತ್ತದೆ. ಅಣ್ಣಾ ಹಜಾರೆ ಪ್ರಣೀತ ಲೋಕಪಾಲ ಮಸೂದೆ ಈ ಐನಾತೀ ಮಾನದಂಡವನ್ನೂ ಹೊಂದಿದ್ದೀತೇ?   

Friday, March 25, 2011

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ!

ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ ಬಿದ್ದು ’ಕನ್ನಡವನ್ನು ಕಾಪಾಡಿ’ ಎಂದು ಬೇಡಿಕೊಳ್ಳೋಣವೇ?!
ನಾವು ಸ್ವೀಕರಿಸಿರುವ ಭಾಷಾವಾರು ಪ್ರಾಂತ ರಚನೆ ಪದ್ಧತಿಯ ವಿವೇಕದಲ್ಲಿ ನಮಗೆ ನಂಬಿಕೆಯಿದೆ ತಾನೇ? ಅಂದಮೇಲೆ ಆಯಾ ಎಲ್ಲೆಕಟ್ಟಿನ ಪ್ರಾಂತದಲ್ಲಿ ಆ ಪ್ರದೇಶ ಭಾಷೆಯ ಪಾರಮ್ಯವನ್ನು ಗೌರವಿಸಬೇಕಾದ್ದೂ ಅನಿವಾರ‍್ಯವಾಗುವುದಿಲ್ಲವೇ?
ಶಿಕ್ಷಣ ಭಾಷೆ ವಿಚಾರದಲ್ಲಿ ನಾವು “ಪ್ರಾದೇಶಿಕ ಭಾಷೆ”ಯನ್ನು “ಮಾತೃ ಭಾಷೆ”ಯೊಂದಿಗೆ ತಳುಕು ಹಾಕುವ ತಪ್ಪು ಮಾಡುತ್ತಬಂದಿರುವುದೂ ಗೊಂದಲಕ್ಕೆ ಒಂದಷ್ಟು ಕಾರಣ. ಭಾಷಾವಾರು ಪ್ರಾಂತವೊಂದರ ಸರಕಾರದ ಆದ್ಯತೆ, ತನಗೆ ಅಸ್ತಿತ್ವವನ್ನು ಕೊಡಮಾಡುವ ಪ್ರದೇಶಿಕ ಭಾಷೆಗಿರಬೇಕೆನ್ನುವುದು ವಸ್ತುನಿಷ್ಠ ನಿರೀಕ್ಷೆ ತಾನೇ? ಆ ಭಾಷೆ, ಆ ರಾಜ್ಯದ, ಹೆಚ್ಚು ಕಮ್ಮಿ, ಎಲ್ಲರ ಮಾತೃ ಭಾಷೆಯೂ ಆಗಿರುತ್ತದೆನ್ನುವುದು ಸಹಜ. ’ನಮ್ಮ ಮಕ್ಕಳಿಗೆ ರಾಜ್ಯ ಭಾಷೆಯ ಮೂಲಕ ಶಿಕ್ಷಣ ನೀಡುತ್ತೇವೆ’ ಎಂಬ ಸಂಕಲ್ಪದ ಅರ್ಥ, “ಮಕ್ಕಳ ಮಾತೃ ಭಾಷೆ”ಯಲ್ಲಿ ಶಿಕ್ಷಣ ನೀಡುವುದು ಎಂದಾಗಬಾರದು! ಆದರೆ ಮೂರ್ಖತನದ ಅಂಥಾ ಘೋಷಣೆ, ಹೇಗೊ, ತಿಳಿದೋ, ತಿಳಿಯದೆಯೋ ಚಾಲ್ತಿಗೆ ಬಂದುಬಿಟ್ಟಿದೆ! ಈ ನೆಪ, ಒಡಕು ಹಾಲಿನ ಕೊಳಕು ರಾಜಕೀಯ ಮಾಡುವ ಫುಡಾರಿಗಳ ಕೈ ಕೈದುವಾಗಿ, ಮರಾಠಿ, ಮಲೆಯಾಳಿ, ತೆಮಿಳು, ತೆಲುಗುಗಳನ್ನು ನಾವೇ ಅನಗತ್ಯವಾಗಿ ಮೈಮೇಲೆಳೆದುಕೊಳ್ಳಬೆಕಾದ ಪ್ರಸಂಗಕ್ಕೆ ಕಾರಣವಾಗಿದೆ!
ಒಂದು ಮಣ್ಣಿನಲ್ಲಿ ಕಾಲೂರಿನಿಂತು, ಅದರ ನೀರನ್ನು ಕುಡಿದು ಬದುಕುವ ಪ್ರತಿಯೊಬ್ಬರೂ ಆ ನೆಲದ ಭಾಷೆಯನ್ನೂ ಮೈತುಂಬಿಕೊಳ್ಳಬೇಕಾದ್ದು ಅತ್ಯಗತ್ಯ. ತಮಿಳ್ನಾಡು ಮತ್ತು ಕೇರಳಗಳು ಆ ಕಡ್ಡಾಯವನ್ನು ಜಾರಿ ಮಾಡಿವೆ. ಅವುಗಳ ವಿರುದ್ಧ ಉಗ್ರ ಘೋಷಣೆ ಕೂಗುವ ಕಾಗದದ ಹಿರೋತನಕ್ಕಿಂತಾ ನಮ್ಮ ನಾಡಿನಲ್ಲಿ ಇಡೀ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ, ಕನ್ನಡ ಮಾತ್ರದಲ್ಲಿ ವ್ಯವಸ್ಥೆಗೊಳಿಸುವ ಪಟ್ಟು ಹೆಚ್ಚು ವೀರ‍್ಯವತ್ತಾದೀತಲ್ಲವೇ?

Tuesday, March 22, 2011

ಮಠಗಳು; ಪ್ರಯೋಜನ ಮತ್ತು ಅನುದಾನ

ಮಠಗಳು; ಪ್ರಯೋಜನ ಮತ್ತು ಅನುದಾನ
ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ.
ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ ತಾಂತ್ರಿಕ Course ಗಳಲ್ಲೂ Demandful ಶಿಕ್ಷಣ ನೀಡುತ್ತಿದ್ದು, ಆ ದಕ್ಷತೆಯಿಂದ ವಿಶ್ವವಿದ್ಯಾಲಯ ಎಂಬ ಔನ್ನತ್ಯವನ್ನೂ ಪಡೆದಿರುವುದಿದೆ. ಆದರೆ ಮಠಗಳೆಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಈ ಮೂಲಭೂತ ಉದ್ದೇಶಕ್ಕಾಗಿಯೇ? ಅಲ್ಲವೇ ಅಲ್ಲ!
ವಿರಕ್ತ-ವೈರಾಗಿಗಳ ಸಾಧನೆ, ತಪಶ್ಚರ‍್ಯೆ, ಲೋಕಾನುಕಂಪ ಮುಂತಾದ ಪ್ರಾಂಜಲ ಗುಣಗಳಿಗೆ ಮನಸೋತು ಅವರ ಸುತ್ತ ಘೇರಾಯಿಸಿದ ಜನಮಾನಸ ಅವರುಗಳನ್ನು ಎಷ್ಟು ಹಚ್ಚಿಕೊಂಡಿರುತ್ತಿತ್ತೆಂದರೆ, ಅವರ ದೇಹವಸಾನದ ನಂತರ ಆ ಅಗಲಿಕೆಯನ್ನು ಸಹಿಸಲಾರದೆ ಅವರ ನೆನಪನ್ನೇ ಮಠವಾಗಿ ಬೆಳೆಸಿಕೊಂಡು ಬಂದಿರುವ ವಾಸ್ತವವಿದೆ. ಇನ್ನೊಂದೆಡೆ ಆಚಾರ‍್ಯ ಪರಂಪರೆ, ಜ್ಞಾನದ ಆಳಕ್ಕಿಳಿದಿಳಿದು, ಒಂದೇ ಶಾಸ್ತ್ರದಲ್ಲಿ ತಮ್ಮ ತಮ್ಮ ಸೂಕ್ಷ್ಮ ವಿಶಿಷ್ಟತೆಯ ಸಿದ್ಧಾಂತಗಳನ್ನು ಸ್ಥಾಪಿಸಿ ಪ್ರತ್ಯೇಕ ಮಠಗಳಾಗಿ ಕವಲೊಡೆದು ಬಂದಿದೆ.
ಹೀಗಾಗಿ ಸಮಾಜ ಸೇವೆಯ ವಿಶಿಷ್ಟತೆ ಒಂದೆಡೆ, ಸೈದ್ಧಾಂತಿಕ ವಿಭಿನ್ನತೆ ಇನ್ನೊಂದೆಡೆ. ಇವು ಮಠಗಳ ಅಸ್ತಿತ್ವದ ಜೀವಾಳ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದೇ ಆದರೆ, ಅದು ಅವುಗಳ ಸುಸೂಕ್ಷ್ಮ ಪರಿಣಿತಿ - Specialization - ಮತ್ತು ಪುರಾತತ್ವ ಮೌಲ್ಯ - Archival Value -ಕಾಪಾಡಿಕೊಳ್ಳುವಷ್ಟಿದ್ದರೆ ಬೇಕಾದಷ್ಟಾಗುತ್ತದೆ; ಇದಕ್ಕೆ ಶತಕೋಟಿ, ಸಹಸ್ರ ಕೋಟಿಗಟ್ಟಲೆಗಳ ಅಗತ್ಯ ಖಂಡಿತಾ ಇರುವುದಿಲ್ಲ!
ಈ ಕೋಟಿಗಟ್ಟಲೆಯೇನಿದ್ದರೂ, ಜಾತಿಯನ್ನು ವೋಟಿನ ಸಂಖ್ಯಾ ಶಕ್ತಿಯನ್ನಾಗಿಸುವ ಉದ್ಯಮದ ಮೇಲೆ ಹೂಡುವ ಬಂಡವಾಳವಾಗುವುದು! ಇದನ್ನು ಕೈಗೊಂಡ ಆಧ್ಯಾತ್ಮ ಪುರುಷ ವೇಷಧಾರಿಗಳು, ಪರಿಣಿತ ಸೈದ್ಧಾಂತಿಕ ಭಿನ್ನತೆಯ Academics ಅನ್ನು ವೋಟಿನ Margin ಆಗಿ ಪರಿವರ್ತಿಸುವ ಪವಾಡ ಪುರುಷರಾಗಿ ಮೆರೆದುಬಿಡುತ್ತಾರೆ!
ಅತ್ಯಲ್ಪ ಸಂಖ್ಯಾತರಾದ ಸಭ್ಯ, ಸಾತ್ವಿಕ, ಸತ್ಪುರುಷರ ಅಳಲೇನೆಂದರೆ, ಈ ಮೆಲಾಟದಲ್ಲಿ ಅನೂಚಾನ ಪರಂಪರೆ, ಸಮಪ್ರದಾಯ, ಆಚಾರ, ಸುಸೂಕ್ಷ್ಮ ಚಿಂತನಶೀಲತೆಯ ಪರಿಣಿತಿಗಲೆಲ್ಲಾ ಏಕಾಏಕೀ ಭ್ರಷ್ಟ - Corrupt - ಅಗಿ ಜೀವನ ಸ್ವಾರಸ್ಯವೇ ನಷ್ಟವಾಗಿ ಹೋಗುತ್ತಿದೆಯಲ್ಲಾ ಎನ್ನುವುದು!

Friday, March 18, 2011

ವ್ಯಾಸರಾಜ ಮಠ - ಆಗಬೇಕಾದ್ದೇನು?....

.
                ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ ಕಟ್ಟಡಕ್ಕೆ ಇದ್ದಿದ್ದರಲ್ಲೊಂದು ‘ಷೇಪು’ ನೀಡಿದ ಪುಣ್ಯ ಶ್ರೀವಿದ್ಯಾಪಯೋನಿಧಿತೀರ್ಥ ಸ್ವಾಮಿಗಳದ್ದು. ಶ್ರೀಮಠದ ಇಂತಹ ಹತ್ತು-ಹಲವು ಕಟ್ಟಡಗಳಿಗೆ ಸಹ ಹೀಗೆ ಲಾಭದಾಯಕವಾಗಿ ಆಕೃತಿ-ಆಯಾಮಗಳನ್ನು ನೀಡಿದ ಕೀರ್ತಿಯೂ ಅವರದೇ. ಆದರೆ ಮುಂದೆ ಮಠವೇ ‘ಷೇಪೆದ್ದುಹೋಗುವ’ ಮುಂಗಾಣ್ಕೆ ಸ್ವಾಮಿಗಳಿಗಿರದೇ ಹೋದದ್ದು ಶಿಷ್ಯರ ದುರ‍್ದೈವವೆಂದಕೊಳ್ಳೋಣವೇ?!
                ಶ್ರೀ ವ್ಯಾಸರಾಯರ ವಿದ್ಯಾ ಕರ್ನಾಟಕ ಸಿಂಹಾಸನದ ಅಧುನಾ ತರುಣ ಸ್ವಾಮೀಜಿಯ ದುಸ್ಸಾಹಸಗಳು ಈಗ ಪದರ ಬಿಚ್ಚಿಕೊಳುತ್ತಿವೆ. (ಅಥವಾ ಪ್ರಯತ್ನಪೂರ್ವ ಬಿಚ್ಚಲಾಗುತ್ತಿದೆ?!) ಚಾತಕಪಕ್ಷಿಗಳಂತೆ ಕಾದಿರುವ ಮಾಧ್ಯಮಗಳು ತಮ್ಮ ‘ಕಾಯಕಧರ‍್ಮ’ಕ್ಕನುಗುಣವಾಗಿ ಮೈಕೂ-ಮಸೂರ ಹಿಡಿಯುತ್ತಿವೆ! ತಿರುಮಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮೊನ್ನೆ ಆಂಧ್ರದ ಪೋಲಿಸರು, ನಂ.1 ಗೊವಿಂದಪ್ಪ ರಸ್ತೆ ಅವರಣದಿಂದಲೇ ಸ್ವಾಮೀಜಿಯನ್ನು ಕರೆದೊಯ್ದಿದ್ದು. ಶಿಷ್ಯರಲ್ಲಿ, ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದ ಘಟನೆಯಿದು. “ಹಿತೈಷಿಗಳ” ನೆರವಿನಿಂದ ಸ್ವಾಮಿಗಳೇನೋ ಮಾರನೆ ಬೆಳಿಗ್ಗೆಯೇ ಹಿಂದಿರುಗಿದರು. ಅದಾದ್ದು ಫಾಲ್ಗುಣ ಶುದ್ಧ ಏಕಾದಶಿಗೆ ಎರಡು ದಿನ ಮುಂಚೆ. ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನು ಪೂರ್ವಾನುಮಾನದಿಂದ ಕಾದಿದ್ದರೋ ಎಂಬಂತೆ, ಶ್ರೀಮಠದ ಶಿಷ್ಯರೆಂಬ ಹಲಕೆಲವರು, ಸ್ವಾಮಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಪಟ್ಟುಹಿಡಿದು, ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು, ಜೋಕೆ’ ಎಂದು ಎಚ್ಚರಿಕೆಯನ್ನೂ ಇಟ್ಟರು! ಮನೋಹರತೀರ್ಥರು ಪೀಠ ಬಿಡಲಿಲ್ಲವಾಗಿ ಪಂಡಿತೊತ್ತಮರ ಏಕಾದಶೀ ಉಪವಾಸ ಸಾಂಗವಾಯಿತು ಎನ್ನೋಣವೇ?!
ಈ ಭಂಡಾಟ-ಮೊಂಡಾಟದಲ್ಲೂ, ವಿದ್ಯಾಮನೋಹರತೀರ್ಥರೆಂಬ ತರುಣ ಸ್ವಾಮೀಜಿಯನ್ನು ಪೀಠದಿಂದಿಳಿಸುವುದು ಖಚಿತ ಎಂಬ ಅಭಿಮತ ಕೆಲ ವಿಚಾರಶೀಲರಲ್ಲಿದ್ದಂತಿದೆ! ನೈತಿಕ ಹೊಣೆ ಹೊತ್ತು ಆ ಕೆಲಸ ಮಾಡಿ ಎಂದವರ ಅಬ್ಬರದ ಕೂಗು! ಅಂತಹ ನೈತಿಕ ಹೊಣೆ ಎನ್ನುವುದು ಅವರಿಗಿದ್ದಿದ್ದರೆ ಪೀಠ ಹತ್ತುತ್ತಿದ್ದರೆ; ಇವರಿಗಿದ್ದಿದ್ದರೆ ಅಂಥಾ ಕೂಗು ಹಾಕುತ್ತಿದ್ದರೇ?!
420ರ ಪರಿಚ್ಛೇದದ ಕಾರ‍್ಯಚಟುವಟಿಕೆಗಳಿಗಾಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮವನ್ನೇನೋ ಜರುಗಿಸಬಹುದು; ಅದು ಸಾಬೀತಾದರೆ ಸರಕಾರ ಮಠವನ್ನು ತಾತ್ಕಾಲಿಕವಾಗಿ Supersede ಮಾಡುವುದಕ್ಕೂ ಮುಂದಾಗಬಹುದು. ಆದರೆ ನಂತರದಲ್ಲಾದರೂ ಮುಖ್ಯಮಂತ್ರಿ ಅಥವಾ ಮುಜರಾಯಿ ಮಂತ್ರಿ, ಹೊಸ ಸ್ವಾಮೀಜಿಯೊಬ್ಬರಿಗೆ ಆಶ್ರಮ ಕೊಟ್ಟು ನೇಮಿಸಲು ಬರುತ್ತದೆಯೇ; ಅದಕ್ಕೆ “ಕರಕಮಲ ಸಂಜಾತತ್ವ”ದ ಪಾವಿತ್ರ್ಯವಾದರೂ ಪ್ರಾಪ್ತವಾಗುತ್ತದೆಯೇ?!
                ವ್ಯಾಸರಾಯ ಮಠಕ್ಕಾಗಲೀ, ಇಂತಹ ಇನ್ನುಳಿದ ಪ್ರಾಚೀನ ಪೀಠಪರಂಪರೆಗಾಗಲೀ ಲಾಗಾಯ್ತಿನಿಂದ ಬಂದ ಸ್ವತ್ತು-ಸಂಪತ್ತುಗಳಿರುವುದು ಸಹಜ. ಇತಿಹಾಸ ಕಾಲದ ಆಳರಸರು, ಸಾಮಂತರು, ಪಾಳೇಗಾರರು ಅಪಾರ ಪ್ರಮಾಣದ ಸ್ಥಿರಾಸ್ತಿಗಳನ್ನು ಮಠ-ಮಾನ್ಯಗಳಿಗೆ ಶಾಸನಬದ್ಧವಾಗಿ ದಾನ ಮಾಡಿರುತ್ತಾರೆ. ಸಾಹುಕಾರರೂ, ಶ್ರೀಮಂತರೂ, ಸಾಮಾನ್ಯರೂ ಅಂದಂದಿನ ಪೀಠಾಧಿಪತಿಗಳ ತಪಃಪ್ರಭಾವದಿಂದ ಉಪಕೃತರಾಗಿ ವಡವೆ-ವಸ್ತ್ರ, ಧನ-ಕನಕಗಳ ದೇಣಿಗೆ ನೀಡಿರುವುದೂ ಇರುತ್ತದೆ. ಅದು ಇಂದಿನ ಯುಗದಲ್ಲಿ ಸಹ ಮುಂದುವರೆದುಕೊಂಡ ಬಂದಿರುವ ವಿದ್ಯಮಾನವೇ. ಆದರೆ ಮಠ-ಸಂಸ್ಥಾನಗಳಿರುವುದು ಬರೀ ದುಡ್ಡು ಮಾಡುವುದಕ್ಕೇ ಅಲ್ಲ; ಅವುಗಳ ಮಹತಿ ದುಡ್ಡಿನಿಂದ ಅಳೆಯುವಂಥದೂ ಅಲ್ಲ. ಅನೂಚಾನ ಮಠಗಳು, ವೈಷ್ಣವವಾಗಲೀ, ಶೈವ-ವೀರಶೈವವೇ ಆಗಲಿ, ಅವುಗಳ ಅಸ್ತಿತ್ವ, ವಿಶಿಷ್ಟ ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಪರಿವ್ರಾಜಕ ಪೀಠಪತಿಗಳು Authority ಮತ್ತು ಮೇಲ್ಪಂಕ್ತಿ ಎನ್ನುವ ಮೂಲಭೂತ ನೆಲೆಯನ್ನು ಹೊಂದಿಕೊಂಡಿರುತ್ತದೆ; ಅಸ್ತಿ-ಪಾಸ್ತಿಯೇನಿದ್ದರೂ ಅದಕ್ಕೆ ಪೂರಕವಾಗಬೇಕಾದ್ದು, ಅಷ್ಟೆ.
                ಈಗಿರುವ ಸವಾಲು, ವ್ಯಾಸರಾಜಮಠಕ್ಕಾಗಲೀ, ಅದರ ವಿದ್ಯಾಮನೋಹರತೀರ್ಥರೆಂಬ ಒಬ್ಬ ಸ್ವಾಮೀಜಿಗಾಗಲೀ ಸೀಮಿತವೆಂದು ಭಾವಿಸಬಾರದು. ಇದನ್ನು ಘಟ್ಟದ ಮೇಲಿನ ಎಲ್ಲಾ ಮಾಧ್ವ ಮಠಗಳೂ, ಯತಿಗಳೂ ಗಂಭೀರವಾಗಿ ಸ್ವೀಕರಿಸಬೇಕು. ಹಿರಿಯ ಅನುಭವೀ, ಅನುಭಾವೀ ಯತಿಗಳಾದ ಶ್ರೀವಿದ್ಯಾಸಾಗರತೀರ್ಥರು, ಶ್ರೀಲಕ್ಷ್ಮೀಂದ್ರತೀರ್ಥರಾದಿಯಾಗಿ ಇನ್ನೂ ಹಲವರು, ಲಾಗಾಯ್ತಿನಿಂದ ವ್ಯಾಸರಾಜ ಮಠದೊಂದಿಗೆ ಸಾಥ್ ಮತ್ತು ಸಲ್ಲಾಪಗಳನ್ನು ಹೊಂದಿರುವ ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥರೂ, ಅಲ್ಲದೆ ವ್ಯಾಸರಾಯ ಮಠಕ್ಕೆ ಸರಿ-ಸಾಟಿಯಾದ ಮಹತ್ವ ಹೊಂದಿರುವ ಉತ್ತರಾದೀಮಠ, ರಾಯರಮಠಗಳ ಶ್ರೀ ಸತ್ಯಾತ್ಮ ತೀರ್ಥರು ಮತ್ತು ಶ್ರೀ ಸುಯತಿಂದ್ರ ತೀರ್ಥರು ನಮ್ಮ ನಡುವೆ ಇದ್ದಾರೆ. ಅವರೆಲ್ಲಾ ಒಗ್ಗೂಡಿ “ಯತಿ ಸಂಹಿತೆ”ಯನ್ನು ಪುನಾರಚಿಸಿಕೊಳ್ಳುವುದು ನಿರೀಕ್ಷಣೀಯ; ಈಗಾಗುತ್ತಿರುವ ಉಲ್ಲಂಘನೆ-ಅನಾಚಾರಗಳು ಇಡೀ ಮಾಧ್ವ ಸಮುದಾಯಕ್ಕೆ ಹೇಗೆ ಮಾರಕ ಎಂಬುದನ್ನು ಯತಿಸಮುದಾಯ ಆಲೋಡನೆ ಮಾಡಬೇಕು; ಹಾದಿ ತಪ್ಪುತ್ತಿರುವ ಯುವ ಯತಿಗೆ ಮೂಗುದಾರ ಹಾಕಿ ಪಳಗಿಸಿ ತಮ್ಮೊಂದಿಗೆ ಒಯ್ಯುವುದು ಸಾಧ್ಯವೇ ಎಂಬುದನ್ನು ಆ ಬೆಳಕಿನಲ್ಲಿ ಅವಲೋಕಿಸಬೇಕು; ಇಲ್ಲಾ ಅವರಿಗೆ ಮುಕ್ತಿ ಕೊಟ್ಟು ಇನ್ನೇನಾದರೂ ಪರ‍್ಯಾಯ ವ್ಯವಸ್ಥೆ ಮಾಡಬೇಕೇ ಎನ್ನವುದನ್ನೂ ಆ ಮಠಾಧಿಪತಿ ಸಮೂಹವೇ ನಿರ್ಧರಿಸುವುದು ಸಾಧುವಾಗುತ್ತದೆಯೇ ಹೊರತು ಶಿಷ್ಯವೃಂದವೆಂದುಕೊಂಡ ಅಮೂರ್ತ ಸಂಘಟನೆಯಲ್ಲ! 

Sunday, March 13, 2011

ಚೆಕ್ ಹಾರಿದ್ದಕ್ಕೆ ಪೀಠ ಬಿಡಬೇಕೇ?

                ಎಪ್ಪತ್ತು ಲಕ್ಷ ರೂಪಾಯಿ ವ್ಯವಹಾರ. ಒಬ್ಬ ವ್ಯವಹಾರಸ್ಥ ಇನ್ನೊಬ್ಬರಿಗೆ ಚೆಕ್ ಕೊಡುತ್ತಾರೆ; ಖಾತೆಯಲ್ಲಿ ಹಣವಿಲ್ಲವೆಂದು ಬ್ಯಾಂಕ್ ತಿರಸ್ಕರಿಸುತ್ತದೆ. ವಿವಂಚಿತರ ಫಿರ‍್ಯಾದು; ಪೊಲೀಸರು ಉತ್ತರದಾಯಿಯನ್ನು ಬಂಧಿಸುತ್ತಾರೆ... ಇತ್ಯಾದಿ      ದಿನನಿತ್ಯದ ಕ್ರೈಮ್ ರೌಂಡ್‌ನಲ್ಲಿ ಇಂಥಾ ಎಷ್ಟು ಮಾಹಿತಿಗಳೋ... ಚೆಕ್ ಕೊಟ್ಟವರು ಒಬ್ಬ ಪೀಠಾಧಿಪತಿಯಾಗಿದ್ದರು ಎನ್ನುವುದು ಈಗಿನ ಹೆಚ್ಚುಗಟ್ಟಲೆ. ಸ್ವಾಮಿ ಪೀಠತ್ಯಾಗ ಮಾಡಬೇಕೆಂದು ಶ್ರೀಮಠದ ಶಿಷ್ಯರೆಂಬ ಹಲಕೆಲವರ ಪಟ್ಟು. ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು ಜೋಕೆ ಎಂದು ಈ ಮಾಧ್ವರು ಎಚ್ಚರಿಕೆ ನೀಡಿದ್ದು ಸ್ವಾರಸ್ಯ!
                ಹಲವು ಮಾಧ್ವರ ಒಂದು ದಿನದ ಹರಿದಿನ ಆಚರಣೆಗಾದರೂ ಈ ಮೂಲಕ ಅವಕಾಶ ಮಾಡಿಕೊಟ್ಟ ಸ್ವಾಮಿಗಳು ಪರೊಕ್ಷವಾಗಿ ಧನ್ಯರೇ ಆಗಿಬಿಡುತ್ತಾರೆ!
                ಅನೂಚಾನ ಮಠಗಳ ಸ್ವಾಮಿಗಳಾದವರು ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಅಥಾರಿಟಿಯೂ, ಮೇಲ್ಪಂಕ್ತಿಯೂ ಆಗಬೇಕಾದವರು. ಅಂಥವರು ಲಕ್ಷ-ಕೋಟಿಗಳ ಲೌಕಿಕ ವ್ಯವಹಾರಗಳಲ್ಲಿ ನೇರವಾಗಿ ತೊಡಗಿಸಿಕೊಂಡಾಗಲೇ ಅವರ ನೈತಿಕ ಹೊಣೆಗೇಡಿತನ ರಾಜಾರೊಷವಾಗಿಬಿಡುತ್ತದೆ! ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನೇ ಕಾದಿದ್ದು, ಅವರು ಪೀಠವನ್ನೇ ಬಿಟ್ಟುಬಿಡಬೇಕೆಂದು ಪಟ್ಟು ಹಿಡಿಯುವುದು, ಸಾತ್ವಿಕತೆಯನ್ನಲ್ಲ, ಪಟ್ಟಭದ್ರತೆಯನ್ನು ಮಾತ್ರಾ ಪ್ರದರ್ಶಿಸೀತು!

Wednesday, February 9, 2011

ಶಾಸಕರ ಜೀವಭಯ!

ಕರ್ನಾಟಕದ ಶಾಸಕರು ವ್ಯಾಪಕವಾಗಿ ಪೊಲೀಸ್ ರಕ್ಷಣೆಗಾಗಿ ಕೋರುತ್ತಿದ್ದಾರೆ. ಅದನ್ನು ಪೂರೈಸಲಾಗುತ್ತಿದೆ ಕೂಡ. ಅಂದಾಜಿನಂತೆ ಶೇ. 90ರಷ್ಟು ಶಾಸಕರು ಈಗ ಪೊಲೀಸ್ ಸಂರಕ್ಷಣೆಯಲ್ಲಿದ್ದಾರಂತೆ. ಜನಪ್ರತಿನಿಧಿಗಳು ಭೀತಿಯಿಂದ ಪೊಲೀಸ್ ರಕ್ಷಣೆಯಲ್ಲಿರುವುದು ಪ್ರತಿಷ್ಠೆಯ ಸಂಗತಿಯೋ? ಅವಮಾನದ ಸಂಗತಿಯೋ? ಶುದ್ಧ, ಚಾರಿತ್ರ್ಯ, ಶುದ್ಧ ಹಸ್ತ, ’ಶ್ರದ್ಧೆ-ಶುದ್ಧಾಂತಃಕರಣಗಳ ಅತ್ಮಸಕ್ಷಿಯುಳ್ಳವರು ಯಾವುದೇ ಹೊರಗಣ ಶಕ್ತಿಗೆ ಅಷ್ಟಾಗಿ ಅಂಜುವುದಿಲ್ಲ. ಪಕ್ಕದ ಮನೆ ಕಿಟಕಿ ಗಾಜಿಗೆ ಕಲ್ಲೆಸೆದು ಗಾಬರಿಗೊಂಡ ಮಗು ಓಡಿಬಂದು ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುವುದು ಸಾಮಾನ್ಯ. ಏಟಿನ ಭಯವಷ್ಟೇ ಅಲ್ಲ, Sense of shame ಸಹ ಆ ಸುಸಂಸ್ಕೃತ ಮಗುವನ್ನು  ಕಾಡಿತು! ಈಗ ಈ ಜನಪ್ರತಿನಿಧಿಗಳನ್ನು ಕಾಡುತ್ತಿರುವುದೇನು? ಇದನ್ನು ಪೊಲೀಸ್ ರಕ್ಷಣೆ ಎನ್ನಬೇಕೋ, ಪೊಲೀಸ್ ಪಹರೆ ಎನ್ನಬೇಕೋ?
ಈ ಪಹರೆಯೂ ಅವರ ಸಾಮಾಜಿಕಾರ್ಥಿಕ ಅಪರಾಧದ ಮೇಲೆ ಕಣ್ಣಿರಿಸುವುದಕ್ಕಿಂತಾ ರಾಜಕೀಯ ಬೇಹುಗಾರಿಕೆ ಉದ್ದೇಶ ಹೊಂದಿದ್ದರೂ ಆಶ್ಚರ‍್ಯವಿಲ್ಲ! ಬಾಹುಬಲ, ಮದ್ಯಬಲ, ಹಣಬಲಗಳಿಂದಲೇ ಮಾರ್ಜಿನಲ್ ವೋಟಿನಿಂದ ಗೆದ್ದು ಬಂದವರಿಗೆ, ಅದೇ ತಂತ್ರದ ಎದುರಾಳಿಯಿಂದ ನಿರಂತರ ಪುಕ-ಪುಕವಿರುವುದು ಸಹಜವೆ. ಅದು ಜೀವ ಹೋಗುವ ಭಯಕ್ಕಿಂತಾ ಹೆಚ್ಚಾಗಿ, ಕುರ್ಚಿ ಕಳುವಾಗಿ ಹೋಗುವ ಭಯ! ಮುತ್ಸದ್ದಿತನದ ತಂತ್ರಗಾರಿಕೆಯಲ್ಲಿ ಈಗ Hidden ಭಯೋತ್ಪಾದಕತೆಯಾದ ಮಾಟ-ಮಂತ್ರವೂ ಪ್ರವೇಶಿಸಿಬಿಟ್ಟಿರುವುದರಿಂದ, ಆಳುವ ಮತ್ತು ವಿರೋಧಿಸುವ ಸೌದಾಗಾರರ ವೈಯಕ್ತಿಕ ಗನ್‌ಮ್ಯಾನ್‌ಗಳಷ್ಟೇ ಸಾಕಾಗಾವುದಿಲ್ಲ; ಜತೆಗೆ ಭೂತೋಚ್ಛಾಟಕ, ಭೂತೋತ್ಪಾದಕ ಆಚಾರು, ವಾಮಾಚಾರುಗಳನ್ನೂ ನೇಮಿಸಬೇಕಾಗಬಹುದದೇನೋ?!  

Sunday, February 6, 2011

ಪ್ರಶಸ್ತಿ ರಾಜಕೀಯ?

ಡಾ. ಚಿಮೂ - ಅಧ್ಯಯನ, ಅಧ್ಯಾಪನ ಮತ್ತು ವಿದ್ವದ್ವಲಯದಲ್ಲಿನ ಸ್ಥಾನ-ಮಾನದಲ್ಲಿ, ವಿಶ್ವವಿದ್ಯಾಲಯವೊಂದರ ಗೌರವ ಡಾಕ್ಟೊರೇಟ್ ಪ್ರಶಸ್ತಿಯನ್ನು ಎಷ್ಟೋ ಮೀರಿದವರು. ಎಷ್ಟೆಷ್ಟೋ ವಿದ್ಯಾರ್ಥಿಗಳಿಗೆ ಗೈಡಾಗಿ Real value ಡಾಕ್ಟೊರೇಟ್ ಪದವಿಗಳನ್ನೇ ಕೊಡಮಾಡಿಸಿರುವವರು. ಬೆಂಗಳೂರು ವಿಶ್ವವಿದ್ಯಾಲಯದ ಒಂದು ಗೌರವ ಡಾಕ್ಟೊರೇಟ್ ತಪ್ಪಿದ್ದರಿಂದ ಅವರ ತೂಕವೇನೂ ಇಳಿಯುವುದಿಲ್ಲ; ಸಿಕ್ಕಬೇಕಾದ ಬಡ್ತಿಯೊಂದು ತಪ್ಪಿಹೋಗುವುದಿಲ್ಲ!
ಮತ್ತೂ ಅಂತಹ ಸಾಧ್ಯತೆಯಿರುವುದು, ಪ್ರಶಸ್ತಿ ನಿರಾಕರಿಸಿದರೆನ್ನಲಾದ “ರಾಜಕೀಯ ಪ್ರಾಧಿಕಾರ”ಕ್ಕೇ! ತಮ್ಮದೇ ಕೈಕೆಳಗಿನ ಪರಪಕ್ಷದ ಸರಕಾರವೊಂದನ್ನು ಉರುಳಿಸುವ, ಉಳಿಸುವ ಆ “ಮರ್ಜಿ ಅಧಿಕಾರ”, ವಿದ್ವಾಂಸರೊಬ್ಬರ ಮೇಲೆ ಪ್ರಯೋಗವಾಗಿದೆಯೆಂದಾದರೆ, ಅದು ಸದಭಿರುಚಿಯೂ ಅಲ್ಲ; ಮೇಲಧಿಕಾರ ಗಿಟ್ಟಿಸುವ ರಾಜಕೀಯ ಮುತ್ಸದ್ದಿತನವೂ ಎನಿಸುವುದಿಲ್ಲ!
ಹಂಸರಾಜ ಭಾರದ್ವಾಜರು ನಿಜವಾಗಿ, ಪ್ರಜ್ಞಾಪೂರ್ವಕವಾಗಿಯೇ ಈ ಕೆಲಸ ಮಾಡಿದ್ದಾರೆಯೇ?! ಡಾ. ಚಿದಾನಂದಮೂರ್ತಿಯವರ ವಿದ್ವತ್ ಮಹತ್ವದ ಬಗ್ಗೆ ಅವಿರಿಗೇನೂ ಗೊತ್ತಿಲ್ಲದೆ ಇರಬಹುದು; ಆದರೆ ಅವರಿಗೆ ಪ್ರಶಸ್ತಿ ಪ್ರಸ್ತಾಪವನ್ನು ನಿರಾಕರಿಸುವಷ್ಟು ನಕಾಕಾರಾತ್ಮಕ ಮಾಹಿತಿ, ತಿಳುವಳಿಕೆಗಳು, ತಮಗೆ ನಿಜವಾಗಿ ಇದೆಯೇ ಎನ್ನುವುದನ್ನು ಕುಲಾಧಿಪತಿಗಳು ಆತ್ಮಸಾಕ್ಷಿಪೂರ್ವಕವಾಗಿ ತಿಳಿಸಿಕೊಡಬೇಕಾಗುತ್ತದೆ!

Friday, February 4, 2011

ಕನ್ನಡ ಇರಲೆಂಬ “ಭೀಷ್ಮ ವಾಣಿ”!


            ಕನ್ನಡ ನಾಡಿನಲ್ಲಿ ಕನ್ನಡ ಇರಬೇಕು ಎಂದು ಹಿಂದಿನೆಲ್ಲಾ ಸಮ್ಮೇಳನಾಧ್ಯಕ್ಷರುಗಳಂತೆ, ಹಾಲೀ ಅಧ್ಯಕ್ಷರೂ ಭಿಷ್ಮವಾಣಿ ಮೊಳಗಿಸಿದ್ದು (ದ್ರೊಣ, ಅರ್ಜುನ, ಅಭಿಮನ್ಯುಗಳು ಕನ್ನಡಕ್ಕಿಲ್ಲವಲ್ಲ!) ಸ್ವಾಗತಾರ್ಹ. ಆದರದು ನಿಸ್ಸಹಾಯಕವಾಗಿ, ಪ್ರತಿಕ್ರಿಯಾತ್ಮಕವಾಗಿ ಇಂಗ್ಲಿಷ್ ವಿರುದ್ಧ ಹರಿಹಾಯುವ ಅಗತ್ಯವಿರಲಿಲ್ಲ.
            ನಮ್ಮದೆಂಬ ಭಾಷೆಗಿರುವ ಅದರದೇ ವಾಸನೆ, ರುಚಿಗಳನ್ನು ಕಂಡುಕೊಳ್ಳುವ, ಉಳಿಸಿಕೊಳ್ಳಲು ಹಂಬಲಿಸುವ ಉತ್ಕಟತೆಯನ್ನು ವ್ಯಾಪಕವಾಗಿ ಪ್ರಚೋದಿಸುವ ಕೆಲಸ, ನಮ್ಮಲ್ಲಿ ಹಿಂದಿಂದಲೂ ನಡೆದಿಲ್ಲ; ಇಂದಿನ ಸಮ್ಮೇಳನವೆಂಬ ಅಬ್ಬರ, ಆರ‍್ಭಟ ಮತ್ತು ರಾಜಕಾರಣಿಗಳ ಡೌಲಿನಲ್ಲೂ ನಡೆಯುತ್ತಿಲ್ಲ. ನಡೆದಿದ್ದರೆ, ಕನ್ನಡತನವೆಂಬುದು ಹಿಂದೆಲ್ಲಾ ಸಂಸ್ಕೃತಕ್ಕೂ, ನವೋದಯ ಯುಗದಲ್ಲಿ ಇಂಗ್ಲಿಷಿಗೂ ಈಗೀಗ ವ್ಯಾಪಾರೀ ಜನಾಂಗದ ವ್ಯಾವಹರಿಕ ಹಿಂದಿಗೂ ಅಡಿಯಾಳಾಗಿ ಮುಂದುವರೆಯಬೇಕಾದ್ದಿರಲಿಲ್ಲ!
            ನೆಲದ ಮಣ್ಣಿಗೆ ಕನ್ನಡದ ಕಸುವನ್ನೂ, ಕುಡಿಯುವ ನೀರಿಗೆ ಕನ್ನಡತನವನ್ನೂ ಊಡದಿರುವುದರಿಂದಲೇ ನಾವು, ಕನ್ನಡಿರು, ಸಂಸ್ಕೃತಕ್ಕೆ ಭಕ್ತರಾಗಿ, ಇಂಗ್ಲಿಷನ್ನು ಹೀಯಾಳಿಸುತ್ತಾ, ಹಿಂದಿಯನ್ನೋ, ತಮಿಳನ್ನೊ ನೋಡಿ ಹೊಟ್ಟೆ ಉರಿದುಕೊಳ್ಳುತ್ತಾ ಬದುಕುವುದು ಅನಿವಾರ‍್ಯವಾಗಿರುವುದು!
            ಈಗಲಾದರೂ ಮಣ್ಣಿನ ವಿಶಿಷ್ಟತೆ ಉಳಿಸಿಕೊಳ್ಳುವ ಪ್ರಾಮಾಣಿಕತೆ ಮೊಳೆತಿದ್ದರೆ, ಅದಕ್ಕೆ ಕಪಟ ಹೊರಾಟದ ಆರ್ಭಟ ಕೈಬಿಡೋಣ. ಕನ್ನಡ ನಾಡಿನ ಮಕ್ಕಳು, ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಮಾತ್ರಾ ಕಲಿಯುವಂತೆ ಮಾಡೋಣ; ಇಲ್ಲದವರಿಗೆ ಕಲಿತವರೆಂಬ ಅಧೀಕೃತ ಮಾನ್ಯತೆ ನೀಡದಿರೋಣ: ಭೂಗೋಳ, ಚರಿತ್ರೆ, ಗಣಿತ ವಿಜ್ಞಾನಗಳನ್ನು ಕನ್ನಡದಲ್ಲಿ ಮತ್ರಾ ಕಲಿಯುವುದು ಅನಿವರ‍್ಯವಾದರೂ ಭಾಷೆ ಮತ್ತು ಸಾಹಿತ್ಯದ ಓದಿಗೆ, ಅವರವರ ಅಭಿರುಚಿ, ಅಗತ್ಯಗಳಿಗೆ ತಕ್ಕಂತೆ ಕನ್ನಡ, ಉರ್ದು, ಸಂಸ್ಕೃತ, ಇಂಗಿಷ್‌ಗಳಲ್ಲಿ ಅವಕಾಶ ಕಲ್ಪಿಸೋಣ!