Friday, March 18, 2011

ವ್ಯಾಸರಾಜ ಮಠ - ಆಗಬೇಕಾದ್ದೇನು?....

.
                ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ ಕಟ್ಟಡಕ್ಕೆ ಇದ್ದಿದ್ದರಲ್ಲೊಂದು ‘ಷೇಪು’ ನೀಡಿದ ಪುಣ್ಯ ಶ್ರೀವಿದ್ಯಾಪಯೋನಿಧಿತೀರ್ಥ ಸ್ವಾಮಿಗಳದ್ದು. ಶ್ರೀಮಠದ ಇಂತಹ ಹತ್ತು-ಹಲವು ಕಟ್ಟಡಗಳಿಗೆ ಸಹ ಹೀಗೆ ಲಾಭದಾಯಕವಾಗಿ ಆಕೃತಿ-ಆಯಾಮಗಳನ್ನು ನೀಡಿದ ಕೀರ್ತಿಯೂ ಅವರದೇ. ಆದರೆ ಮುಂದೆ ಮಠವೇ ‘ಷೇಪೆದ್ದುಹೋಗುವ’ ಮುಂಗಾಣ್ಕೆ ಸ್ವಾಮಿಗಳಿಗಿರದೇ ಹೋದದ್ದು ಶಿಷ್ಯರ ದುರ‍್ದೈವವೆಂದಕೊಳ್ಳೋಣವೇ?!
                ಶ್ರೀ ವ್ಯಾಸರಾಯರ ವಿದ್ಯಾ ಕರ್ನಾಟಕ ಸಿಂಹಾಸನದ ಅಧುನಾ ತರುಣ ಸ್ವಾಮೀಜಿಯ ದುಸ್ಸಾಹಸಗಳು ಈಗ ಪದರ ಬಿಚ್ಚಿಕೊಳುತ್ತಿವೆ. (ಅಥವಾ ಪ್ರಯತ್ನಪೂರ್ವ ಬಿಚ್ಚಲಾಗುತ್ತಿದೆ?!) ಚಾತಕಪಕ್ಷಿಗಳಂತೆ ಕಾದಿರುವ ಮಾಧ್ಯಮಗಳು ತಮ್ಮ ‘ಕಾಯಕಧರ‍್ಮ’ಕ್ಕನುಗುಣವಾಗಿ ಮೈಕೂ-ಮಸೂರ ಹಿಡಿಯುತ್ತಿವೆ! ತಿರುಮಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮೊನ್ನೆ ಆಂಧ್ರದ ಪೋಲಿಸರು, ನಂ.1 ಗೊವಿಂದಪ್ಪ ರಸ್ತೆ ಅವರಣದಿಂದಲೇ ಸ್ವಾಮೀಜಿಯನ್ನು ಕರೆದೊಯ್ದಿದ್ದು. ಶಿಷ್ಯರಲ್ಲಿ, ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದ ಘಟನೆಯಿದು. “ಹಿತೈಷಿಗಳ” ನೆರವಿನಿಂದ ಸ್ವಾಮಿಗಳೇನೋ ಮಾರನೆ ಬೆಳಿಗ್ಗೆಯೇ ಹಿಂದಿರುಗಿದರು. ಅದಾದ್ದು ಫಾಲ್ಗುಣ ಶುದ್ಧ ಏಕಾದಶಿಗೆ ಎರಡು ದಿನ ಮುಂಚೆ. ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನು ಪೂರ್ವಾನುಮಾನದಿಂದ ಕಾದಿದ್ದರೋ ಎಂಬಂತೆ, ಶ್ರೀಮಠದ ಶಿಷ್ಯರೆಂಬ ಹಲಕೆಲವರು, ಸ್ವಾಮಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಪಟ್ಟುಹಿಡಿದು, ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು, ಜೋಕೆ’ ಎಂದು ಎಚ್ಚರಿಕೆಯನ್ನೂ ಇಟ್ಟರು! ಮನೋಹರತೀರ್ಥರು ಪೀಠ ಬಿಡಲಿಲ್ಲವಾಗಿ ಪಂಡಿತೊತ್ತಮರ ಏಕಾದಶೀ ಉಪವಾಸ ಸಾಂಗವಾಯಿತು ಎನ್ನೋಣವೇ?!
ಈ ಭಂಡಾಟ-ಮೊಂಡಾಟದಲ್ಲೂ, ವಿದ್ಯಾಮನೋಹರತೀರ್ಥರೆಂಬ ತರುಣ ಸ್ವಾಮೀಜಿಯನ್ನು ಪೀಠದಿಂದಿಳಿಸುವುದು ಖಚಿತ ಎಂಬ ಅಭಿಮತ ಕೆಲ ವಿಚಾರಶೀಲರಲ್ಲಿದ್ದಂತಿದೆ! ನೈತಿಕ ಹೊಣೆ ಹೊತ್ತು ಆ ಕೆಲಸ ಮಾಡಿ ಎಂದವರ ಅಬ್ಬರದ ಕೂಗು! ಅಂತಹ ನೈತಿಕ ಹೊಣೆ ಎನ್ನುವುದು ಅವರಿಗಿದ್ದಿದ್ದರೆ ಪೀಠ ಹತ್ತುತ್ತಿದ್ದರೆ; ಇವರಿಗಿದ್ದಿದ್ದರೆ ಅಂಥಾ ಕೂಗು ಹಾಕುತ್ತಿದ್ದರೇ?!
420ರ ಪರಿಚ್ಛೇದದ ಕಾರ‍್ಯಚಟುವಟಿಕೆಗಳಿಗಾಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮವನ್ನೇನೋ ಜರುಗಿಸಬಹುದು; ಅದು ಸಾಬೀತಾದರೆ ಸರಕಾರ ಮಠವನ್ನು ತಾತ್ಕಾಲಿಕವಾಗಿ Supersede ಮಾಡುವುದಕ್ಕೂ ಮುಂದಾಗಬಹುದು. ಆದರೆ ನಂತರದಲ್ಲಾದರೂ ಮುಖ್ಯಮಂತ್ರಿ ಅಥವಾ ಮುಜರಾಯಿ ಮಂತ್ರಿ, ಹೊಸ ಸ್ವಾಮೀಜಿಯೊಬ್ಬರಿಗೆ ಆಶ್ರಮ ಕೊಟ್ಟು ನೇಮಿಸಲು ಬರುತ್ತದೆಯೇ; ಅದಕ್ಕೆ “ಕರಕಮಲ ಸಂಜಾತತ್ವ”ದ ಪಾವಿತ್ರ್ಯವಾದರೂ ಪ್ರಾಪ್ತವಾಗುತ್ತದೆಯೇ?!
                ವ್ಯಾಸರಾಯ ಮಠಕ್ಕಾಗಲೀ, ಇಂತಹ ಇನ್ನುಳಿದ ಪ್ರಾಚೀನ ಪೀಠಪರಂಪರೆಗಾಗಲೀ ಲಾಗಾಯ್ತಿನಿಂದ ಬಂದ ಸ್ವತ್ತು-ಸಂಪತ್ತುಗಳಿರುವುದು ಸಹಜ. ಇತಿಹಾಸ ಕಾಲದ ಆಳರಸರು, ಸಾಮಂತರು, ಪಾಳೇಗಾರರು ಅಪಾರ ಪ್ರಮಾಣದ ಸ್ಥಿರಾಸ್ತಿಗಳನ್ನು ಮಠ-ಮಾನ್ಯಗಳಿಗೆ ಶಾಸನಬದ್ಧವಾಗಿ ದಾನ ಮಾಡಿರುತ್ತಾರೆ. ಸಾಹುಕಾರರೂ, ಶ್ರೀಮಂತರೂ, ಸಾಮಾನ್ಯರೂ ಅಂದಂದಿನ ಪೀಠಾಧಿಪತಿಗಳ ತಪಃಪ್ರಭಾವದಿಂದ ಉಪಕೃತರಾಗಿ ವಡವೆ-ವಸ್ತ್ರ, ಧನ-ಕನಕಗಳ ದೇಣಿಗೆ ನೀಡಿರುವುದೂ ಇರುತ್ತದೆ. ಅದು ಇಂದಿನ ಯುಗದಲ್ಲಿ ಸಹ ಮುಂದುವರೆದುಕೊಂಡ ಬಂದಿರುವ ವಿದ್ಯಮಾನವೇ. ಆದರೆ ಮಠ-ಸಂಸ್ಥಾನಗಳಿರುವುದು ಬರೀ ದುಡ್ಡು ಮಾಡುವುದಕ್ಕೇ ಅಲ್ಲ; ಅವುಗಳ ಮಹತಿ ದುಡ್ಡಿನಿಂದ ಅಳೆಯುವಂಥದೂ ಅಲ್ಲ. ಅನೂಚಾನ ಮಠಗಳು, ವೈಷ್ಣವವಾಗಲೀ, ಶೈವ-ವೀರಶೈವವೇ ಆಗಲಿ, ಅವುಗಳ ಅಸ್ತಿತ್ವ, ವಿಶಿಷ್ಟ ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಪರಿವ್ರಾಜಕ ಪೀಠಪತಿಗಳು Authority ಮತ್ತು ಮೇಲ್ಪಂಕ್ತಿ ಎನ್ನುವ ಮೂಲಭೂತ ನೆಲೆಯನ್ನು ಹೊಂದಿಕೊಂಡಿರುತ್ತದೆ; ಅಸ್ತಿ-ಪಾಸ್ತಿಯೇನಿದ್ದರೂ ಅದಕ್ಕೆ ಪೂರಕವಾಗಬೇಕಾದ್ದು, ಅಷ್ಟೆ.
                ಈಗಿರುವ ಸವಾಲು, ವ್ಯಾಸರಾಜಮಠಕ್ಕಾಗಲೀ, ಅದರ ವಿದ್ಯಾಮನೋಹರತೀರ್ಥರೆಂಬ ಒಬ್ಬ ಸ್ವಾಮೀಜಿಗಾಗಲೀ ಸೀಮಿತವೆಂದು ಭಾವಿಸಬಾರದು. ಇದನ್ನು ಘಟ್ಟದ ಮೇಲಿನ ಎಲ್ಲಾ ಮಾಧ್ವ ಮಠಗಳೂ, ಯತಿಗಳೂ ಗಂಭೀರವಾಗಿ ಸ್ವೀಕರಿಸಬೇಕು. ಹಿರಿಯ ಅನುಭವೀ, ಅನುಭಾವೀ ಯತಿಗಳಾದ ಶ್ರೀವಿದ್ಯಾಸಾಗರತೀರ್ಥರು, ಶ್ರೀಲಕ್ಷ್ಮೀಂದ್ರತೀರ್ಥರಾದಿಯಾಗಿ ಇನ್ನೂ ಹಲವರು, ಲಾಗಾಯ್ತಿನಿಂದ ವ್ಯಾಸರಾಜ ಮಠದೊಂದಿಗೆ ಸಾಥ್ ಮತ್ತು ಸಲ್ಲಾಪಗಳನ್ನು ಹೊಂದಿರುವ ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥರೂ, ಅಲ್ಲದೆ ವ್ಯಾಸರಾಯ ಮಠಕ್ಕೆ ಸರಿ-ಸಾಟಿಯಾದ ಮಹತ್ವ ಹೊಂದಿರುವ ಉತ್ತರಾದೀಮಠ, ರಾಯರಮಠಗಳ ಶ್ರೀ ಸತ್ಯಾತ್ಮ ತೀರ್ಥರು ಮತ್ತು ಶ್ರೀ ಸುಯತಿಂದ್ರ ತೀರ್ಥರು ನಮ್ಮ ನಡುವೆ ಇದ್ದಾರೆ. ಅವರೆಲ್ಲಾ ಒಗ್ಗೂಡಿ “ಯತಿ ಸಂಹಿತೆ”ಯನ್ನು ಪುನಾರಚಿಸಿಕೊಳ್ಳುವುದು ನಿರೀಕ್ಷಣೀಯ; ಈಗಾಗುತ್ತಿರುವ ಉಲ್ಲಂಘನೆ-ಅನಾಚಾರಗಳು ಇಡೀ ಮಾಧ್ವ ಸಮುದಾಯಕ್ಕೆ ಹೇಗೆ ಮಾರಕ ಎಂಬುದನ್ನು ಯತಿಸಮುದಾಯ ಆಲೋಡನೆ ಮಾಡಬೇಕು; ಹಾದಿ ತಪ್ಪುತ್ತಿರುವ ಯುವ ಯತಿಗೆ ಮೂಗುದಾರ ಹಾಕಿ ಪಳಗಿಸಿ ತಮ್ಮೊಂದಿಗೆ ಒಯ್ಯುವುದು ಸಾಧ್ಯವೇ ಎಂಬುದನ್ನು ಆ ಬೆಳಕಿನಲ್ಲಿ ಅವಲೋಕಿಸಬೇಕು; ಇಲ್ಲಾ ಅವರಿಗೆ ಮುಕ್ತಿ ಕೊಟ್ಟು ಇನ್ನೇನಾದರೂ ಪರ‍್ಯಾಯ ವ್ಯವಸ್ಥೆ ಮಾಡಬೇಕೇ ಎನ್ನವುದನ್ನೂ ಆ ಮಠಾಧಿಪತಿ ಸಮೂಹವೇ ನಿರ್ಧರಿಸುವುದು ಸಾಧುವಾಗುತ್ತದೆಯೇ ಹೊರತು ಶಿಷ್ಯವೃಂದವೆಂದುಕೊಂಡ ಅಮೂರ್ತ ಸಂಘಟನೆಯಲ್ಲ! 

No comments:

Post a Comment