Friday, August 5, 2011

’ಬಲಿಷ್ಠ ಲೋಕಪಾಲ’ - ಯಾವ ಅರ್ಥದಲ್ಲಿ?

                 ದೇಶದಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಬಲಿಷ್ಠ ಲೋಕಪಾಲಬೇಕೆಂಬುದು ಬಹುಮಂದಿ ಮುಗ್ಧರ ಅಶಯ  ಆದರಿದು ಕುರುಡು ನಂಬಿಕೆ. ಹಾಗೆಂದು ಬಿಡಿಸಿ ಹೇಳಿದರೂ ಯಾರೂ ಏಕೆ ನಂಬದಿರುವುದು ದುರ್ದೈವ!

                ಬಲಿಷ್ಠ ಲೋಕಪಾಲದ ಆಸೆ ಬಾಲಿಶ. ಪರೋಕ್ಷವಾಗಿ ಇದು, ’ಮಿಲಿಟರಿ ದಂಡನಾಯಕನೊಬ್ಬ ದೇಶವನ್ನಾಳಲಿಎಂಬ ಬಯಕೆಯೇ ಆಗುತ್ತದೆ!

                ವ್ಯಾಪಕ ಭ್ರಷ್ಟಾಚಾರದ ವಿರುದ್ಧ ಬೊಬ್ಬೆ ಹಾಕುವ ಅಣ್ಣಗಳ್ಯಾರೂ ದೇಶದ ಪ್ರಜಾಸತ್ತೆಯ ಬೇರುಗಳನ್ನು ಬಲಪಡಿಸುವತ್ತ ಆಲೋಚಿಸುತ್ತಿಲ್ಲ; ಬದಲಿಗೆ ಪ್ರಜಾಸತ್ತೆ ಹೆಸರಿನಲ್ಲಿ ದರೋಡೆ ಮಾಡುತ್ತಿರುವ ತಲೆಹಿಡುಕರ ವಿರುದ್ಧ ಸಾತ್ವಿಕ ರೋಷದ ಜ್ವಾಲೆ ಎಬ್ಬಿಸಿ ಅದರಲ್ಲಿ ಕಾಗದದ ತುಂಡುಗಳನ್ನು ಸುಟ್ಟುಹಾಕುತ್ತಿದ್ದಾರೆ, ಅಷ್ಟೆ!

                ನಮ್ಮ ಶಾಸನಸಭೆಗಳು ಮತ್ತು ಸಂಸತ್ತು, ಅವುಗಳು ಮುಂದುಮಾಡುವ ಮುಖ್ಯಮಂತ್ರಿ - ಪ್ರಧಾನ ಮಂತ್ರಿ ಮತ್ತವರ ಸಂಪುಟಗಳೇ ನಿಜವಾದ ಅರ್ಥದಲ್ಲಿ ಲೋಕಪಾಲ ಅಂದರೆ ಪ್ರಜೆಗಳನ್ನು ರಕ್ಷಿಸುವವರು ಆಗಬೇಕು. ಅವರಮೇಲಿನ್ನೊಬ್ಬನೆಂದರೆ ಅದು ಒಬಾಮನೋ, ಒಸಾಮನೊ ಆಗಬೇಕಷ್ಟೆ!

                ರಾಜಾಗಳು, ಕಲ್ಮಾಡಿಗಳು, ಯಡಿಯೂರಪ್ಪಾದಿಗಳೆಲ್ಲಾ ಪ್ರಸ್ತುತ ವ್ಯಾಖ್ಯೆಯಲ್ಲಿ ಪ್ರಜಾಪ್ರನಿಧಿಗಳೇ! ಇವರು ನಡೆಸಿರುವ ಆಡಳಿತವೆಲ್ಲಾ ಜನಾದೇಶದ ಮೇರೆಗೇ! ಆದರದು ಎಷ್ಟು ಜನರ ಆದೇಶಎಂದು ಯಾರಾದರೂ ಗಂಭೀರವಾಗಿ ಲೆಕ್ಕ ಹಾಕಿದ್ದಾರೆಯೇ? ದೇಶದ ಶಾಸನಸಭೆಗಳಾಗಲೀ, ಸಂಸತ್ತಾಗಲೀ ಓಟು ಹಾಕಿದವರ ಸರಾಸರಿ ಎಷ್ಟು ಪ್ರತಿಶತವನ್ನು ಪ್ರತಿನಿಧಿಸುತ್ತವೆ? ಅದರಲ್ಲಿ ಪಕ್ಷಗಳು, ಅವುಗಳಲ್ಲೂ ಭಿನ್ನಮತ-ಗುಂಪುಗುಳಿತನ! ಇದೆಂಥಾ ಜನಾದೇಶ? ಯಾವರ್ಥದಲ್ಲಿ ಪ್ರಜಾಪ್ರಭುತ್ವ?

                ಸಂಸತ್ತು/ಶಾಸನಸಭೆಗಳು ಕಡ್ಡಾಯವಾಗಿ ಕನಿಷ್ಠ ಶೇ. ೫೦ರಷ್ಟು  ಪ್ರಜ್ಞಾವಂತ ಮತದಾರರನ್ನಾದರೂ ಪ್ರತಿನಿಧಿಸಬೇಕು. ಹಾಗಾದಾಗ ಅವು, ತಾವೇ ಜವಾಬ್ದಾರಿಯುತವಾಗಿ ವರ್ತಿಸಬೇಕಾದ್ದು ಅನಿವಾರ‍್ಯವಾಗುತ್ತದೆ. ನಮ್ಮ ಒತ್ತಾಯ, ಆಂದೋಳನ, ಉಪವಾಸಗಳು ಈ ನಿಟ್ಟಿನಲ್ಲಾದರೆ ಸಾಧುವಾದಿತು.

Friday, April 22, 2011

ಲೋಕಪಾಲ ಮಸೂದೆ; ನಾಗರಿಕ V/s ಅನಾಗರಿಕ ಸಮಾಜ

                ಲೋಕಪಾಲ ಮಸೂದೆ ಕರಡು ರಚನಾ ಸಮಿತಿಯಿಂದ ನ್ಯಾ. ಸಂತೋಷ ಹೆಗಡೆ ಹೊರಬರುತ್ತೇನೆಂದ ’ಅ’ ಸಂತೋಷಕ್ಕೆ ನಾಗರಿಕ ಸಮುದಾಯದ ಅಸಂತೃಪ್ತಿ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯವರ ಸಾತ್ವಿಕತೆಗೆ ಬೆಚ್ಚಿಬಿದ್ದು, ಸರಕಾರ, ಜನಲೋಕಪಾಲ ಮಸೂದೆ ರಚನೆಗೆ ಹೂಂಗುಟ್ಟಿದರೂ, ಈ ಬಗ್ಗೆ ಅಪಸ್ವರ-ಅಪಶೃತಿಗಳು ಆದಿಯಿಂದಲೇ ಕೇಳಿಸುತ್ತಿದೆ. ಕರಡು ರಚನಾ ಸಮಿತಿಯಲ್ಲಿ ನಾಗರಿಕ ಸಮಾಜದ ಪ್ರತಿನಿಧಿಗಳೂ, ಮೂವರು ಕೇಂದ್ರ ಸಚಿವರೂ ಇರುತ್ತಾರೆಂಬ ಪರಿಕಲ್ಪನೆಯೇ ಹಾಸ್ಯಾಸ್ಪದ! ಹೀಗೆಂದರೆ, ಸಚಿವರು ನಾಗರಿಕ ಸಮಾಜದವರಲ್ಲ ಎಂಬ ಸತ್ಯಸ್ಯ ಸತ್ಯವನ್ನು, ತಿಳಿದೋ ತಿಳಿಯದೆಯೋ ಒಪ್ಪಿಕೊಂಡಂತಾಗಲಿಲ್ಲವೇ?!
                ನ್ಯಾಯವಿದ ಹೆಗ್ಡೆಯವರೂ, ನ್ಯಾಯವಾದಿ ಭೂಷಣದ್ವಯರೂ, ಹಜಾರೆಯವರಂತಹ ಪ್ರಾಮಾಣಿಕರೂ, ಅಗ್ನಿವೇಶರಂತಹ ಋಷಿ ಸಮಾನರೂ ಲಂಚ ವಿರೋಧದ ಮುಂಚೂಣಿಯಲ್ಲದ್ದರೂ ಸಮರ್ಪಕ ಮಸೂದೆಯೊಂದು ಸಿದ್ಧವಾಗಿ ಅದು ಹಾಗೇ ಕಾಯ್ದೆಯಾದೀತೆಂಬ ನಿರೀಕ್ಷೆ ಸುತರಾಂ ಬೇಡ! ಸಂಸತ್ತು ಅದನ್ನು ತನ್ನದೇ ಸ್ವಹಿತದ ಉದ್ದೇಶದಿಂದ ಒಪ್ಪುವುದಿಲ್ಲವಷ್ಟೇ ಅಲ್ಲ, ಪ್ರಜಾತಂತ್ರದ ಹಿತದೃಷ್ಟಿಯಿಂದಲೂ ಇಂಥದು ಸಮರ್ಥನೀಯವಾಗುವುದಿಲ್ಲ!
                ಲಂಚಗುಳಿತನದ ಕೂಪವಾಗಿವೆ ಎಂದು ನಮ್ಮ ಕೆಂಗಣ್ಣಿರುವುದು, ಆರ್‌ಟಿಓ, ಸಬ್‌ರಿಜಿಸ್ಟ್ರಾರ್ ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಸರಕಾರೀ ಕಾರ‍್ಯಾಲಯಗಳ ಮೇಲೆ. ಆದರೆ ಅಲ್ಲಿರುವುದು ಭ್ರಷ್ಟಾಚಾರದ ಬೇರು ಅಲ್ಲವೇ ಅಲ್ಲ! ನಿಜವಾಗಿ ಅದಿರುವುದು ಜಾತಿವಾದ, ಕೋಮುವಾದ, ಮನುವಾದ, ನಕ್ಸಲ್‌ವಾದ ಇತ್ಯಾದಿ ಇತ್ಯಾದಿ ರಾಜಕೀಯ ಭಾಷಣದ ಕ್ಲೀಷೆಗಳಲ್ಲಿ; ಛದ್ರೀಕರಣ, ತುಷ್ಟೀಕರಣ ರಾಜನೀತಿಯಿಂದ ಹಾಕಿಕೊಳ್ಳುವ ವೋಟ್ ಬ್ಯಾಂಕ್ ಬೇಲಿಗಳಲ್ಲಿ; ಇಂತಹ ಕೇವಲ 20-25 ಪ್ರತಿಶತ ಪ್ರಾತಿನಿಧ್ಯವಿರುವ ಪಾರ‍್ಲಿಮೆಂಟ್ ಅಥವಾ ಅಸೆಂಬ್ಲಿ ಇಡೀ ದೇಶದ, ರಾಜ್ಯದ ಪರುಪತ್ತೆ ನಡೆಸುವ ಪ್ರಜಾಸತ್ತೆಯ ದುರಂತದಲ್ಲಿ! ಇದು ನಿಚ್ಚಳ ಮತ್ತು ಸುಸ್ಪಷ್ಟ! ಆದರೂ ಪತ್ರಿಕೆಗಳನ್ನೂ ಒಳಗೊಂಡ ಮಾಧ್ಯಮಗಳೂ ಸೇರಿದಂತೆ, ಬಹುತೇಕ ವ್ಯವಸ್ಥೆಗಳು  ಇದರದೇ ಫಲಾನುಭವಿಗಳು! ಅವುಗಳ ಜಾಣ ಕುರುಡಿಗೆ ಇದು ಕಾಣಿಸುವುದಿಲ್ಲ; ಜಾಣ ಕಿವುಡಿಗೆ ಇಂಥಾ ಮಾತುಗಳು ಕೇಳಿಸುವುದಿಲ್ಲ!   

Tuesday, April 12, 2011

"ಕುಮಾರ" ಹೇಳಿಕೆಯಲ್ಲಿ "ಕೌಮಾರ‍್ಯ"ಕ್ಕೆ ಮೀರಿದ "ಪ್ರೌಢತೆ"!

                ಭ್ರಷ್ಟಾಚಾರದ ಸಂಬಂಧ, ಮಹಾತ್ಮಾ ಗಾಂಧೀಜಿ ಹೆಸರನ್ನುಲೇಖಿಸಿದ ಬಾಲಿಶ ಅಧಿಕಪ್ರಸಂಗವನ್ನು ಬಿಟ್ಟರೆ, ತರುಣ ನಾಯಕ ಕುಮರಸ್ವಾಮಿಯವರ ಹೇಳಿಕೆ, ಉಳಿದಂತೆ ಅತ್ಯಂತ ಪ್ರಬುದ್ಧವಾಗಿಯೇ ಇದೆ! ರಾಜಕೀಯದ ಚಿಂದಿ ಹೆಕ್ಕುವ ಪುಢಾರಿಗಳೇನೋ ಸಹಜವಾಗಿ ಚಿಲ್ಲರೆ ಮಾತಾಡಿಕೊಳ್ಳುತ್ತಾರೆ; ತಟಸ್ಥ ಬುದ್ಧಿಜೀವಿಗಳಾದರೂ ಇದನ್ನು ಪ್ರೌಢವಾಗಿ ತೆಗೆದುಕೊಳ್ಳಬೇಕಗಿದೆ!
                ಈ ಚರ್ಚೆ ಹಿನ್ನೆಲೆ, Corruption ಎಂಬ ಮಾತು. ಈ ಶಬ್ದದ ನಿಘಂಟಿನ ಅರ್ಥ, ಕಾಸಿನ ಅಥವಾ ನೋಟು ತೆಕ್ಕೆಗಳ, ಬ್ಯಾಂಕ್ ಬ್ಯಲೆನ್ಸಿನ ಲಂಚಕ್ಕೆ ಸೀಮಿತವಲ್ಲ; ಕೊಳೆತು ನಾರುವ ಹದಗೆಟ್ಟತನವನ್ನೂ, ವ್ಯವಸ್ಥೆಯ ಶೇಪುಗೇಡೀತನವನ್ನೂ ಅದು ಸೂಚಿಸುತ್ತದೆ. ಅದು ಭಟ್ಟಿಯಾಗುತ್ತಿರುವ ಅಮಲಿನ ಮೂಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ, ಕಚೇರಿಯ ಜವಾನ, ಗುಮಾಸ್ತ, ಮ್ಯಾನೇಜರು, ಸಾಹೇಬರುಗಳ ಮೇಜು, ಕಪಾಟು, ಲಾಕರುಗಳ ಜಾಲಾಟವನ್ನು ಉನ್ನತೀಕರಿಸಹೋಗುವುದು, ‘ಹೆಂಡದ ಮಡಕೆಯ ಹೊರಗೆ ತೊಳೆದಂತೆ ಆಗದೇ?
ಭ್ರಷ್ಟಾಚಾರ ಕುರಿತಂತೆ, ಮಾಜಿ ಮುಖ್ಯಮಂತ್ರಿ, ಪಕ್ಷದ ಹಾಲೀ ರಾಜ್ಯಾಧ್ಯಕ್ಷ ಎಚ್ಕೆಡಿಯವರು ತಳಿದೋ, ತಿಳಿಯದೆಯೋ ಹೇಳಿಬಿಟ್ಟಿರುವ ವಾಚ್ಯಾರ್ಥದ ಲಕ್ಷಣಕ್ಕೆ, ನಮ್ಮ ಪ್ರಸಕ್ತ ರಾಜಕೀಯ ವಿದ್ಯಮಾನ ಬೇಕಾದಷ್ಟೇ ಲಕ್ಷ್ಯ ಒದಗಿಸೀತು. ದಿನ-ನಿತ್ಯದ ಜಾತಿ ರಾಜಕಾರಣ, ಹಸಿಸುಳ್ಳುಗಳ ಓಲೈಕೆ ಮಾಲಿಕೆ, ಅರ್ಥವಾಗಲೀ, ಭಾವವಾಗಲೀ ಇಲ್ಲದ ಮೀಸಲಾತಿ ಪದ್ಧತಿಗಳಲ್ಲಿ ಯಾವ ಪ್ರಾಮಾಣಿಕತೆಯಿದೆ? ನಡೆಯುತ್ತಿರುವ ಗುಪ್ತ ಮತಾಂತರದಲ್ಲಾಗಲೀ, ನಡೆಯುತ್ತಿದೆ ಎಂಬ ಉತ್ಕಟ ಹೋರಾಟದಲ್ಲಾಗಲೀ, ಆ ಹೆಸರಿನಿಂದಲೋ ಮತ್ತೊಂದು ನೆಪದಿಂದಲೋ, ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ಬೇಳೆ ಬೇಸಿಕೊಳ್ಳು ಹಿತಾಸಕ್ತಿಗಳಲ್ಲಾಗಲೀ ಯಾವ ಪಾರಲೌಕಿಕ ಮೌಲ್ಯ ಹೊಳೆದುಹೋಗುತ್ತಿದೆ?
ಹಜಾರೆಯವರಂಥಾ ಅಣ್ಣಗಳು, ಸಾಧ್ಯವಾದರೆ, ಪ್ರಾಮಾಣಿಕವಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸಲಿ; ತುಂಡು-ಬಾಡಿನ ಸಾಕು ನಾಯಿಗಳಿಂದಷ್ಟೇ ಅಲ್ಲದೆ ಗೆಲ್ಲುವ ಅಭ್ಯರ್ಥಿಗೆ, ಎಲ್ಲಾ ಜಾತಿ-ಮತ, ಭಾಷೆ, ಕೋಮುಗಳ ಜನರ ವೋಟೂ ಅನಿವಾರ‍್ಯವಾಗುವ ಸನ್ನಿವೇಶವನ್ನುಂಟು ಮಾಡಲಿ. ಅಗ ಪ್ರಜಾಪ್ರಭುತ್ವ ಅವರಿಗೆ ಚಿರ ಋಣಿಯಾದೀತು!

Sunday, April 10, 2011

ಭಲೆ, ಕುಮಾರಸ್ವಾಮಿ! ಭೇಷ್! ಭಲೆ


                ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಮಾನಿ ನಾನಲ್ಲ; ಅವರ ಪಕ್ಷದ ಅನುಕಂಪಿಯೂ ಅಲ್ಲ. ಆದರೂ ಏ. 10ರ ಅಪರಾಹ್ನದ ಇ-ಟಿವಿ ಸುದ್ದಿ ನನ್ನನ್ನು ಚಿಕಿತಗೊಳಿಸತು. ವಿಸ್ಮಯದಿಂದ ಸುಧಾರಿಸಿಕೊಂಡನಂತರ ಅದು ಇದನ್ನು ಅಕ್ಷರಿಸುವ ಪ್ರೇರಣೆಯಾಯಿತು!
ರಾಜಕೀಯವೆನ್ನುವುದರಲ್ಲಿರಬಹುದಾದ ಕೊಚ್ಚೆ-ಕೆಸರುಗಳು ಒತ್ತಟ್ಟಿಗಿರಲಿ, ಅವರು ಆಗ ಹುಬ್ಬಳ್ಳಿಯಲ್ಲಿ ಅಂದ ಮಾತು ರಾಜಕೀಯಾತೀತವಾಗಿ ಅಭಿನಂದನಾರ್ಹವೆನಿಸಿತು.
ಭ್ರಷ್ಟಾಚರಣೆಯಿಲ್ಲದೆ ಪಕ್ಷಗಳನ್ನು ಸಂಘಟಿಸುವುದು ಅಸಾಧ್ಯ; ವೋಟುಗಳನ್ನು ಹುಟ್ಟಿಸುವುದು ಸಾಧ್ಯವಿಲ್ಲ’ ಎಂಬ ವಿದ್ಯಮಾನದ ಸತ್ಯವನ್ನು ಸಾರ್ವಜನಿಕರಿಗೆ ಬಿಡಿಸಿಹೇಳಿದ ಆ ’ಗಂಡಸುತನ’ ಪ್ರಮಾಣಿಕವಾಗಿಯೂ ಸಂತೋಷ ತಂದಿತು.
                ಆಳವಾದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಜಾಗೃತಿ ಹುಟ್ಟಿಸಿದ್ದು ಅಣ್ಣಾ ಹಜಾರೆಯವರ ಸತ್ಸಾಧನೆಯೆನ್ನುವುದರಲ್ಲಿ ವಿವಾದವಿಲ್ಲ. ಆದರೆ ಇದು ಭ್ರಷ್ಟಾಚಾರದ ವಿರುದ್ಧ ರಣಕಹಳೆ ಎಂದು ಬೀಗುವವರ ಬಗ್ಗೆ ಮರುಕವಾಗುತ್ತದೆ!
                ಲೋಕಪಾಲ ಮೂಸೂದೆ ಬರೆಯುವ ಕಾಯ್ದೆ ಪಂಡಿತರ ಪ್ರತಿಭೋತ್ಸಾಹದ ಪದಾಕ್ಷರಗಳ ಬಿಗಿಕಟ್ಟಿನಿಂದ ಮಾತ್ರವೇ ದೇಶದ ಸಾರ್ವಜನಿಕ ಜೀವನ ಭ್ರಷ್ಟಾಚಾರದ ಕೊಳೆ-ಕೆಸರಿನಿಂದ ಮುಕ್ತವಾಗಿಬಿಡುತ್ತದೆಂದುಕೊಳ್ಳುವುದು ಅತ್ಯಂತ ಅಸಂಭವ. ಇದು ಭ್ರಮಾಲೋಕ. ನಮ್ಮ ಈ ಭ್ರಮಾಲೋಕಕ್ಕೆ ಕಾರಣ, ಭ್ರಷ್ಟಾಚಾರವೆನ್ನುವುದರ ಬಗ್ಗೆ ನಮ್ಮ ಬಾಲಿಶ ಪರಿಕಲ್ಪನೆ! ಭ್ರಷ್ಟಾಚಾರವೆಂದರೆ, ಚಿಲ್ಲರೆ ಕಾಸಿನಿಂದ ಆರಂಭವಾಗಿ ಲೋಕಾಯುಕ್ತರು ಹಿಡಿದುಹಕುವ ನುರಾರು ಕೋಟಿ ಅಕ್ರಮ ಸಂಭಾವನೆ; ಅದಕ್ಕೆ ತಕ್ಕ ಶಿಕ್ಷೆಯಾಗುವ ವ್ಯವಸ್ಥೆಯಾದರೆ ಸಾಕು ಎಂದು ನಾವಂದುಕೊಂಡುಬಿಟ್ಟಿದ್ದೇವೆ. ಆದರೆ ನಮ್ಮ ಕಣ್ಣೆದುರಿಗೇ ರಾಜಾರೋಷವಾಗಿ ನಡೆಯುವ ಜಾತಿ ರಾಜಕಾರಣ, ಸುಳ್ಳು-ಸುಳ್ಳು ಓಲೈಕೆ, ಅರ್ಥವಿಲ್ಲದ-ಭಾವವಿಲ್ಲದ ಮೀಸಲಾತಿ ಪದ್ಧತಿ ಇವೆಲ್ಲಾ ಔಟ್ ಅಂಡ್ ಔಟ್ ಭ್ರಷ್ಟಾಚಾರವಲ್ಲವೇ; ಮಿಥ್ಯಾಚಾರವಲ್ಲವೇ? ಮತಾಂತರವಾಗಲೀ, ಅದರ ವಿರುದ್ಧ ಉಕ್ಕಟ ಹೋರಾಟವಾಗಲೀ ನಡೆಯುವುದೇಕೆ? ಅಗಿಂದಾಗ್ಗೆ ಕೊಮು ಗಲಭೆಗಳನ್ನು  ಭುಗಿಲೆಬ್ಬಿಸಿ ನಿರ್ದಿಷ್ಟ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಬೇಳೆ ಬೇಯಿಸಿಕೊಳ್ಳುವುದು ಹೇಗೆ? ಇದನ್ನೆಲ್ಲಾ ಒಂದೇ ಮಾತಿಮಲ್ಲಿ “ರಾಜಕೀಯ” ಎಂದು ವರ್ಣಿಸಲಾಗುವುದಿಲ್ಲವೇ? ಇದು ಅವ್ಯಾಹತವಾಗಿದ್ದುಕೊಂಡಿರುವ ತನಕ, ಸಾರ್ವಜನಿಕ ಜೀವನ ನೆಮ್ಮದಿ ಕಾಣುವುದಾದರೂ ಸಾಧ್ಯವೇ?  
                ಇದಕ್ಕೆ ಪರಿಹಾರವೆನ್ನುವುದೇ ಇಲ್ಲವೆಂದಲ್ಲ. ಅದು ಅತ್ಯಂತ ದುರ್ಲಭವೂ ಅಲ್ಲ. ಆ ಸರಳ ಪರಿಹಾರ ಪ್ರಜಾಪ್ರತಿನಿಧಿ ಕಾಯ್ದೆಯ ಮಾನವಂತಿಕೆಯಲ್ಲಿದೆ! ನಿಜವಾದ ಬಹುಮತ ಪ್ರತಿನಿಧಿಗಳು - ಚಲಾಯಿತ ಅರ್ಹ ಮತದ ಶೇ. 50+ ಪಡೆದವರು - ಮಾತ್ರಾ ಸಂಸದರು/ಶಾಸಕರಾಗುವಂತೆ ಕಡ್ಡಾಯ ಮಾಡಿದರೆ ಸಾಕು. ಈ ಹುಚ್ಚುಚ್ಚಾರಗಳಿಗೆ ತಂತಾನೇ ಕಡಿವಾಣ ಬೀಳುತ್ತದೆ. ಅಣ್ಣಾ ಹಜಾರೆ ಪ್ರಣೀತ ಲೋಕಪಾಲ ಮಸೂದೆ ಈ ಐನಾತೀ ಮಾನದಂಡವನ್ನೂ ಹೊಂದಿದ್ದೀತೇ?   

Friday, March 25, 2011

ಕೇರಳ, ತಮಿಳ್ನಾಡುಗಳಲ್ಲಿ ಕನ್ನಡ ಶಾಲೆಗಳ ಕಷ್ಟ!

ತಮಿಳ್ನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಶಿಕ್ಷಣದಲ್ಲಿ ಕಡ್ಡಾಯವಾದದ್ದಕ್ಕೆ ಕನ್ನಡಾಭಿಮಾನಿಗಳು ಕನಲಿ ಕಳವಳಿಸುತ್ತಿದ್ದಾರೆ! ಕೇರಳದ ಮೇಲೆ ಕೆರಳೋಣವೇ; ಅಥವಾ ತಮಿಳ್ನಾಡಿನ ಕಾಲಿಗೆ ಬಿದ್ದು ’ಕನ್ನಡವನ್ನು ಕಾಪಾಡಿ’ ಎಂದು ಬೇಡಿಕೊಳ್ಳೋಣವೇ?!
ನಾವು ಸ್ವೀಕರಿಸಿರುವ ಭಾಷಾವಾರು ಪ್ರಾಂತ ರಚನೆ ಪದ್ಧತಿಯ ವಿವೇಕದಲ್ಲಿ ನಮಗೆ ನಂಬಿಕೆಯಿದೆ ತಾನೇ? ಅಂದಮೇಲೆ ಆಯಾ ಎಲ್ಲೆಕಟ್ಟಿನ ಪ್ರಾಂತದಲ್ಲಿ ಆ ಪ್ರದೇಶ ಭಾಷೆಯ ಪಾರಮ್ಯವನ್ನು ಗೌರವಿಸಬೇಕಾದ್ದೂ ಅನಿವಾರ‍್ಯವಾಗುವುದಿಲ್ಲವೇ?
ಶಿಕ್ಷಣ ಭಾಷೆ ವಿಚಾರದಲ್ಲಿ ನಾವು “ಪ್ರಾದೇಶಿಕ ಭಾಷೆ”ಯನ್ನು “ಮಾತೃ ಭಾಷೆ”ಯೊಂದಿಗೆ ತಳುಕು ಹಾಕುವ ತಪ್ಪು ಮಾಡುತ್ತಬಂದಿರುವುದೂ ಗೊಂದಲಕ್ಕೆ ಒಂದಷ್ಟು ಕಾರಣ. ಭಾಷಾವಾರು ಪ್ರಾಂತವೊಂದರ ಸರಕಾರದ ಆದ್ಯತೆ, ತನಗೆ ಅಸ್ತಿತ್ವವನ್ನು ಕೊಡಮಾಡುವ ಪ್ರದೇಶಿಕ ಭಾಷೆಗಿರಬೇಕೆನ್ನುವುದು ವಸ್ತುನಿಷ್ಠ ನಿರೀಕ್ಷೆ ತಾನೇ? ಆ ಭಾಷೆ, ಆ ರಾಜ್ಯದ, ಹೆಚ್ಚು ಕಮ್ಮಿ, ಎಲ್ಲರ ಮಾತೃ ಭಾಷೆಯೂ ಆಗಿರುತ್ತದೆನ್ನುವುದು ಸಹಜ. ’ನಮ್ಮ ಮಕ್ಕಳಿಗೆ ರಾಜ್ಯ ಭಾಷೆಯ ಮೂಲಕ ಶಿಕ್ಷಣ ನೀಡುತ್ತೇವೆ’ ಎಂಬ ಸಂಕಲ್ಪದ ಅರ್ಥ, “ಮಕ್ಕಳ ಮಾತೃ ಭಾಷೆ”ಯಲ್ಲಿ ಶಿಕ್ಷಣ ನೀಡುವುದು ಎಂದಾಗಬಾರದು! ಆದರೆ ಮೂರ್ಖತನದ ಅಂಥಾ ಘೋಷಣೆ, ಹೇಗೊ, ತಿಳಿದೋ, ತಿಳಿಯದೆಯೋ ಚಾಲ್ತಿಗೆ ಬಂದುಬಿಟ್ಟಿದೆ! ಈ ನೆಪ, ಒಡಕು ಹಾಲಿನ ಕೊಳಕು ರಾಜಕೀಯ ಮಾಡುವ ಫುಡಾರಿಗಳ ಕೈ ಕೈದುವಾಗಿ, ಮರಾಠಿ, ಮಲೆಯಾಳಿ, ತೆಮಿಳು, ತೆಲುಗುಗಳನ್ನು ನಾವೇ ಅನಗತ್ಯವಾಗಿ ಮೈಮೇಲೆಳೆದುಕೊಳ್ಳಬೆಕಾದ ಪ್ರಸಂಗಕ್ಕೆ ಕಾರಣವಾಗಿದೆ!
ಒಂದು ಮಣ್ಣಿನಲ್ಲಿ ಕಾಲೂರಿನಿಂತು, ಅದರ ನೀರನ್ನು ಕುಡಿದು ಬದುಕುವ ಪ್ರತಿಯೊಬ್ಬರೂ ಆ ನೆಲದ ಭಾಷೆಯನ್ನೂ ಮೈತುಂಬಿಕೊಳ್ಳಬೇಕಾದ್ದು ಅತ್ಯಗತ್ಯ. ತಮಿಳ್ನಾಡು ಮತ್ತು ಕೇರಳಗಳು ಆ ಕಡ್ಡಾಯವನ್ನು ಜಾರಿ ಮಾಡಿವೆ. ಅವುಗಳ ವಿರುದ್ಧ ಉಗ್ರ ಘೋಷಣೆ ಕೂಗುವ ಕಾಗದದ ಹಿರೋತನಕ್ಕಿಂತಾ ನಮ್ಮ ನಾಡಿನಲ್ಲಿ ಇಡೀ ಶಾಲಾ ಶಿಕ್ಷಣವನ್ನು ಕಡ್ಡಾಯವಾಗಿ ಕನ್ನಡದಲ್ಲಿ, ಕನ್ನಡ ಮಾತ್ರದಲ್ಲಿ ವ್ಯವಸ್ಥೆಗೊಳಿಸುವ ಪಟ್ಟು ಹೆಚ್ಚು ವೀರ‍್ಯವತ್ತಾದೀತಲ್ಲವೇ?

Tuesday, March 22, 2011

ಮಠಗಳು; ಪ್ರಯೋಜನ ಮತ್ತು ಅನುದಾನ

ಮಠಗಳು; ಪ್ರಯೋಜನ ಮತ್ತು ಅನುದಾನ
ಮಠಗಳಿಗೆ ಸರಕಾರೀ ಅನುದಾನ ಅವಶ್ಯವಾಗಿ ಬೇಕು; ಇದರಲ್ಲಿ ರಾಜಕೀಯ ಸುತರಾಂ ಇಲ್ಲವೇ ಇಲ್ಲ ಎಂದು ಪ್ರತಿಪಾದಿಸಲು ಸಚಿವ ಪ್ರೊ. ಮುಮ್ತಾಜ್ ಅಲಿಖಾನ್ ಲೇಖನ ಬರೆದಿದ್ದಾರೆ.
ಅವರೆಂದಿರುವಂತೆ, ದೊಡ್ಡ ಮಠಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೈದ್ಯಕೀಯ ತಾಂತ್ರಿಕ Course ಗಳಲ್ಲೂ Demandful ಶಿಕ್ಷಣ ನೀಡುತ್ತಿದ್ದು, ಆ ದಕ್ಷತೆಯಿಂದ ವಿಶ್ವವಿದ್ಯಾಲಯ ಎಂಬ ಔನ್ನತ್ಯವನ್ನೂ ಪಡೆದಿರುವುದಿದೆ. ಆದರೆ ಮಠಗಳೆಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಈ ಮೂಲಭೂತ ಉದ್ದೇಶಕ್ಕಾಗಿಯೇ? ಅಲ್ಲವೇ ಅಲ್ಲ!
ವಿರಕ್ತ-ವೈರಾಗಿಗಳ ಸಾಧನೆ, ತಪಶ್ಚರ‍್ಯೆ, ಲೋಕಾನುಕಂಪ ಮುಂತಾದ ಪ್ರಾಂಜಲ ಗುಣಗಳಿಗೆ ಮನಸೋತು ಅವರ ಸುತ್ತ ಘೇರಾಯಿಸಿದ ಜನಮಾನಸ ಅವರುಗಳನ್ನು ಎಷ್ಟು ಹಚ್ಚಿಕೊಂಡಿರುತ್ತಿತ್ತೆಂದರೆ, ಅವರ ದೇಹವಸಾನದ ನಂತರ ಆ ಅಗಲಿಕೆಯನ್ನು ಸಹಿಸಲಾರದೆ ಅವರ ನೆನಪನ್ನೇ ಮಠವಾಗಿ ಬೆಳೆಸಿಕೊಂಡು ಬಂದಿರುವ ವಾಸ್ತವವಿದೆ. ಇನ್ನೊಂದೆಡೆ ಆಚಾರ‍್ಯ ಪರಂಪರೆ, ಜ್ಞಾನದ ಆಳಕ್ಕಿಳಿದಿಳಿದು, ಒಂದೇ ಶಾಸ್ತ್ರದಲ್ಲಿ ತಮ್ಮ ತಮ್ಮ ಸೂಕ್ಷ್ಮ ವಿಶಿಷ್ಟತೆಯ ಸಿದ್ಧಾಂತಗಳನ್ನು ಸ್ಥಾಪಿಸಿ ಪ್ರತ್ಯೇಕ ಮಠಗಳಾಗಿ ಕವಲೊಡೆದು ಬಂದಿದೆ.
ಹೀಗಾಗಿ ಸಮಾಜ ಸೇವೆಯ ವಿಶಿಷ್ಟತೆ ಒಂದೆಡೆ, ಸೈದ್ಧಾಂತಿಕ ವಿಭಿನ್ನತೆ ಇನ್ನೊಂದೆಡೆ. ಇವು ಮಠಗಳ ಅಸ್ತಿತ್ವದ ಜೀವಾಳ. ಆದ್ದರಿಂದ ಮಠಗಳಿಗೆ ಅನುದಾನ ಕೊಡುವುದೇ ಆದರೆ, ಅದು ಅವುಗಳ ಸುಸೂಕ್ಷ್ಮ ಪರಿಣಿತಿ - Specialization - ಮತ್ತು ಪುರಾತತ್ವ ಮೌಲ್ಯ - Archival Value -ಕಾಪಾಡಿಕೊಳ್ಳುವಷ್ಟಿದ್ದರೆ ಬೇಕಾದಷ್ಟಾಗುತ್ತದೆ; ಇದಕ್ಕೆ ಶತಕೋಟಿ, ಸಹಸ್ರ ಕೋಟಿಗಟ್ಟಲೆಗಳ ಅಗತ್ಯ ಖಂಡಿತಾ ಇರುವುದಿಲ್ಲ!
ಈ ಕೋಟಿಗಟ್ಟಲೆಯೇನಿದ್ದರೂ, ಜಾತಿಯನ್ನು ವೋಟಿನ ಸಂಖ್ಯಾ ಶಕ್ತಿಯನ್ನಾಗಿಸುವ ಉದ್ಯಮದ ಮೇಲೆ ಹೂಡುವ ಬಂಡವಾಳವಾಗುವುದು! ಇದನ್ನು ಕೈಗೊಂಡ ಆಧ್ಯಾತ್ಮ ಪುರುಷ ವೇಷಧಾರಿಗಳು, ಪರಿಣಿತ ಸೈದ್ಧಾಂತಿಕ ಭಿನ್ನತೆಯ Academics ಅನ್ನು ವೋಟಿನ Margin ಆಗಿ ಪರಿವರ್ತಿಸುವ ಪವಾಡ ಪುರುಷರಾಗಿ ಮೆರೆದುಬಿಡುತ್ತಾರೆ!
ಅತ್ಯಲ್ಪ ಸಂಖ್ಯಾತರಾದ ಸಭ್ಯ, ಸಾತ್ವಿಕ, ಸತ್ಪುರುಷರ ಅಳಲೇನೆಂದರೆ, ಈ ಮೆಲಾಟದಲ್ಲಿ ಅನೂಚಾನ ಪರಂಪರೆ, ಸಮಪ್ರದಾಯ, ಆಚಾರ, ಸುಸೂಕ್ಷ್ಮ ಚಿಂತನಶೀಲತೆಯ ಪರಿಣಿತಿಗಲೆಲ್ಲಾ ಏಕಾಏಕೀ ಭ್ರಷ್ಟ - Corrupt - ಅಗಿ ಜೀವನ ಸ್ವಾರಸ್ಯವೇ ನಷ್ಟವಾಗಿ ಹೋಗುತ್ತಿದೆಯಲ್ಲಾ ಎನ್ನುವುದು!

Friday, March 18, 2011

ವ್ಯಾಸರಾಜ ಮಠ - ಆಗಬೇಕಾದ್ದೇನು?....

.
                ಬೆಂಗಳೂರಿನ ಗಾಂಧೀಬಜ಼ಾರ್ ಪರಿಸರದಲ್ಲಿ ನಂ. 1, ಗೋವಿಂದಪ್ಪ ರಸ್ತೆ ಎಂಬ ಅಡ್ರೆಸ್ ಚಿರಪರಿಚಿತ. ಅದು ಮಠ. ರಾಯರ ಚಿಕ್ಕದೊಂದು ಬೃಂದಾವನ ಸನ್ನಿಧ್ಯವೂ ಅಲ್ಲುಂಟು. ಆದರೂ ಶ್ರೀವ್ಯಾಸರಾಜಮಠ ಎಂದೇ ಅದು ಜನಜನಿತ. ಕೂಚು-ಕೂಚಾದ ಕಟ್ಟಡಕ್ಕೆ ಇದ್ದಿದ್ದರಲ್ಲೊಂದು ‘ಷೇಪು’ ನೀಡಿದ ಪುಣ್ಯ ಶ್ರೀವಿದ್ಯಾಪಯೋನಿಧಿತೀರ್ಥ ಸ್ವಾಮಿಗಳದ್ದು. ಶ್ರೀಮಠದ ಇಂತಹ ಹತ್ತು-ಹಲವು ಕಟ್ಟಡಗಳಿಗೆ ಸಹ ಹೀಗೆ ಲಾಭದಾಯಕವಾಗಿ ಆಕೃತಿ-ಆಯಾಮಗಳನ್ನು ನೀಡಿದ ಕೀರ್ತಿಯೂ ಅವರದೇ. ಆದರೆ ಮುಂದೆ ಮಠವೇ ‘ಷೇಪೆದ್ದುಹೋಗುವ’ ಮುಂಗಾಣ್ಕೆ ಸ್ವಾಮಿಗಳಿಗಿರದೇ ಹೋದದ್ದು ಶಿಷ್ಯರ ದುರ‍್ದೈವವೆಂದಕೊಳ್ಳೋಣವೇ?!
                ಶ್ರೀ ವ್ಯಾಸರಾಯರ ವಿದ್ಯಾ ಕರ್ನಾಟಕ ಸಿಂಹಾಸನದ ಅಧುನಾ ತರುಣ ಸ್ವಾಮೀಜಿಯ ದುಸ್ಸಾಹಸಗಳು ಈಗ ಪದರ ಬಿಚ್ಚಿಕೊಳುತ್ತಿವೆ. (ಅಥವಾ ಪ್ರಯತ್ನಪೂರ್ವ ಬಿಚ್ಚಲಾಗುತ್ತಿದೆ?!) ಚಾತಕಪಕ್ಷಿಗಳಂತೆ ಕಾದಿರುವ ಮಾಧ್ಯಮಗಳು ತಮ್ಮ ‘ಕಾಯಕಧರ‍್ಮ’ಕ್ಕನುಗುಣವಾಗಿ ಮೈಕೂ-ಮಸೂರ ಹಿಡಿಯುತ್ತಿವೆ! ತಿರುಮಲ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊನ್ನೆ ಮೊನ್ನೆ ಆಂಧ್ರದ ಪೋಲಿಸರು, ನಂ.1 ಗೊವಿಂದಪ್ಪ ರಸ್ತೆ ಅವರಣದಿಂದಲೇ ಸ್ವಾಮೀಜಿಯನ್ನು ಕರೆದೊಯ್ದಿದ್ದು. ಶಿಷ್ಯರಲ್ಲಿ, ಸಾರ್ವಜನಿಕರಲ್ಲಿ ಸಂಚಲನ ಮೂಡಿಸಿದ ಘಟನೆಯಿದು. “ಹಿತೈಷಿಗಳ” ನೆರವಿನಿಂದ ಸ್ವಾಮಿಗಳೇನೋ ಮಾರನೆ ಬೆಳಿಗ್ಗೆಯೇ ಹಿಂದಿರುಗಿದರು. ಅದಾದ್ದು ಫಾಲ್ಗುಣ ಶುದ್ಧ ಏಕಾದಶಿಗೆ ಎರಡು ದಿನ ಮುಂಚೆ. ಯಾವಾಗಲೋ ವ್ಯಾವಹಾರಿಕ ಅಚಾತುರ‍್ಯದಿಂದ ಒಂದು ಚೆಕ್ ಹಾರಿಬೀಳುವುದನ್ನು ಪೂರ್ವಾನುಮಾನದಿಂದ ಕಾದಿದ್ದರೋ ಎಂಬಂತೆ, ಶ್ರೀಮಠದ ಶಿಷ್ಯರೆಂಬ ಹಲಕೆಲವರು, ಸ್ವಾಮಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಪಟ್ಟುಹಿಡಿದು, ‘ಏಕಾದಶಿಯಂದು ಉಪವಾಸ ಮಾಡಿಬಿಟ್ಟೇವು, ಜೋಕೆ’ ಎಂದು ಎಚ್ಚರಿಕೆಯನ್ನೂ ಇಟ್ಟರು! ಮನೋಹರತೀರ್ಥರು ಪೀಠ ಬಿಡಲಿಲ್ಲವಾಗಿ ಪಂಡಿತೊತ್ತಮರ ಏಕಾದಶೀ ಉಪವಾಸ ಸಾಂಗವಾಯಿತು ಎನ್ನೋಣವೇ?!
ಈ ಭಂಡಾಟ-ಮೊಂಡಾಟದಲ್ಲೂ, ವಿದ್ಯಾಮನೋಹರತೀರ್ಥರೆಂಬ ತರುಣ ಸ್ವಾಮೀಜಿಯನ್ನು ಪೀಠದಿಂದಿಳಿಸುವುದು ಖಚಿತ ಎಂಬ ಅಭಿಮತ ಕೆಲ ವಿಚಾರಶೀಲರಲ್ಲಿದ್ದಂತಿದೆ! ನೈತಿಕ ಹೊಣೆ ಹೊತ್ತು ಆ ಕೆಲಸ ಮಾಡಿ ಎಂದವರ ಅಬ್ಬರದ ಕೂಗು! ಅಂತಹ ನೈತಿಕ ಹೊಣೆ ಎನ್ನುವುದು ಅವರಿಗಿದ್ದಿದ್ದರೆ ಪೀಠ ಹತ್ತುತ್ತಿದ್ದರೆ; ಇವರಿಗಿದ್ದಿದ್ದರೆ ಅಂಥಾ ಕೂಗು ಹಾಕುತ್ತಿದ್ದರೇ?!
420ರ ಪರಿಚ್ಛೇದದ ಕಾರ‍್ಯಚಟುವಟಿಕೆಗಳಿಗಾಗಿ ವ್ಯಕ್ತಿಯ ಮೇಲೆ ಕಾನೂನು ಕ್ರಮವನ್ನೇನೋ ಜರುಗಿಸಬಹುದು; ಅದು ಸಾಬೀತಾದರೆ ಸರಕಾರ ಮಠವನ್ನು ತಾತ್ಕಾಲಿಕವಾಗಿ Supersede ಮಾಡುವುದಕ್ಕೂ ಮುಂದಾಗಬಹುದು. ಆದರೆ ನಂತರದಲ್ಲಾದರೂ ಮುಖ್ಯಮಂತ್ರಿ ಅಥವಾ ಮುಜರಾಯಿ ಮಂತ್ರಿ, ಹೊಸ ಸ್ವಾಮೀಜಿಯೊಬ್ಬರಿಗೆ ಆಶ್ರಮ ಕೊಟ್ಟು ನೇಮಿಸಲು ಬರುತ್ತದೆಯೇ; ಅದಕ್ಕೆ “ಕರಕಮಲ ಸಂಜಾತತ್ವ”ದ ಪಾವಿತ್ರ್ಯವಾದರೂ ಪ್ರಾಪ್ತವಾಗುತ್ತದೆಯೇ?!
                ವ್ಯಾಸರಾಯ ಮಠಕ್ಕಾಗಲೀ, ಇಂತಹ ಇನ್ನುಳಿದ ಪ್ರಾಚೀನ ಪೀಠಪರಂಪರೆಗಾಗಲೀ ಲಾಗಾಯ್ತಿನಿಂದ ಬಂದ ಸ್ವತ್ತು-ಸಂಪತ್ತುಗಳಿರುವುದು ಸಹಜ. ಇತಿಹಾಸ ಕಾಲದ ಆಳರಸರು, ಸಾಮಂತರು, ಪಾಳೇಗಾರರು ಅಪಾರ ಪ್ರಮಾಣದ ಸ್ಥಿರಾಸ್ತಿಗಳನ್ನು ಮಠ-ಮಾನ್ಯಗಳಿಗೆ ಶಾಸನಬದ್ಧವಾಗಿ ದಾನ ಮಾಡಿರುತ್ತಾರೆ. ಸಾಹುಕಾರರೂ, ಶ್ರೀಮಂತರೂ, ಸಾಮಾನ್ಯರೂ ಅಂದಂದಿನ ಪೀಠಾಧಿಪತಿಗಳ ತಪಃಪ್ರಭಾವದಿಂದ ಉಪಕೃತರಾಗಿ ವಡವೆ-ವಸ್ತ್ರ, ಧನ-ಕನಕಗಳ ದೇಣಿಗೆ ನೀಡಿರುವುದೂ ಇರುತ್ತದೆ. ಅದು ಇಂದಿನ ಯುಗದಲ್ಲಿ ಸಹ ಮುಂದುವರೆದುಕೊಂಡ ಬಂದಿರುವ ವಿದ್ಯಮಾನವೇ. ಆದರೆ ಮಠ-ಸಂಸ್ಥಾನಗಳಿರುವುದು ಬರೀ ದುಡ್ಡು ಮಾಡುವುದಕ್ಕೇ ಅಲ್ಲ; ಅವುಗಳ ಮಹತಿ ದುಡ್ಡಿನಿಂದ ಅಳೆಯುವಂಥದೂ ಅಲ್ಲ. ಅನೂಚಾನ ಮಠಗಳು, ವೈಷ್ಣವವಾಗಲೀ, ಶೈವ-ವೀರಶೈವವೇ ಆಗಲಿ, ಅವುಗಳ ಅಸ್ತಿತ್ವ, ವಿಶಿಷ್ಟ ವ್ರತ-ನೇಮ, ಸಂಪ್ರದಾಯದಿ ಅಚರಣೆಗಳಿಗೆ ಪರಿವ್ರಾಜಕ ಪೀಠಪತಿಗಳು Authority ಮತ್ತು ಮೇಲ್ಪಂಕ್ತಿ ಎನ್ನುವ ಮೂಲಭೂತ ನೆಲೆಯನ್ನು ಹೊಂದಿಕೊಂಡಿರುತ್ತದೆ; ಅಸ್ತಿ-ಪಾಸ್ತಿಯೇನಿದ್ದರೂ ಅದಕ್ಕೆ ಪೂರಕವಾಗಬೇಕಾದ್ದು, ಅಷ್ಟೆ.
                ಈಗಿರುವ ಸವಾಲು, ವ್ಯಾಸರಾಜಮಠಕ್ಕಾಗಲೀ, ಅದರ ವಿದ್ಯಾಮನೋಹರತೀರ್ಥರೆಂಬ ಒಬ್ಬ ಸ್ವಾಮೀಜಿಗಾಗಲೀ ಸೀಮಿತವೆಂದು ಭಾವಿಸಬಾರದು. ಇದನ್ನು ಘಟ್ಟದ ಮೇಲಿನ ಎಲ್ಲಾ ಮಾಧ್ವ ಮಠಗಳೂ, ಯತಿಗಳೂ ಗಂಭೀರವಾಗಿ ಸ್ವೀಕರಿಸಬೇಕು. ಹಿರಿಯ ಅನುಭವೀ, ಅನುಭಾವೀ ಯತಿಗಳಾದ ಶ್ರೀವಿದ್ಯಾಸಾಗರತೀರ್ಥರು, ಶ್ರೀಲಕ್ಷ್ಮೀಂದ್ರತೀರ್ಥರಾದಿಯಾಗಿ ಇನ್ನೂ ಹಲವರು, ಲಾಗಾಯ್ತಿನಿಂದ ವ್ಯಾಸರಾಜ ಮಠದೊಂದಿಗೆ ಸಾಥ್ ಮತ್ತು ಸಲ್ಲಾಪಗಳನ್ನು ಹೊಂದಿರುವ ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿ ತೀರ್ಥರೂ, ಅಲ್ಲದೆ ವ್ಯಾಸರಾಯ ಮಠಕ್ಕೆ ಸರಿ-ಸಾಟಿಯಾದ ಮಹತ್ವ ಹೊಂದಿರುವ ಉತ್ತರಾದೀಮಠ, ರಾಯರಮಠಗಳ ಶ್ರೀ ಸತ್ಯಾತ್ಮ ತೀರ್ಥರು ಮತ್ತು ಶ್ರೀ ಸುಯತಿಂದ್ರ ತೀರ್ಥರು ನಮ್ಮ ನಡುವೆ ಇದ್ದಾರೆ. ಅವರೆಲ್ಲಾ ಒಗ್ಗೂಡಿ “ಯತಿ ಸಂಹಿತೆ”ಯನ್ನು ಪುನಾರಚಿಸಿಕೊಳ್ಳುವುದು ನಿರೀಕ್ಷಣೀಯ; ಈಗಾಗುತ್ತಿರುವ ಉಲ್ಲಂಘನೆ-ಅನಾಚಾರಗಳು ಇಡೀ ಮಾಧ್ವ ಸಮುದಾಯಕ್ಕೆ ಹೇಗೆ ಮಾರಕ ಎಂಬುದನ್ನು ಯತಿಸಮುದಾಯ ಆಲೋಡನೆ ಮಾಡಬೇಕು; ಹಾದಿ ತಪ್ಪುತ್ತಿರುವ ಯುವ ಯತಿಗೆ ಮೂಗುದಾರ ಹಾಕಿ ಪಳಗಿಸಿ ತಮ್ಮೊಂದಿಗೆ ಒಯ್ಯುವುದು ಸಾಧ್ಯವೇ ಎಂಬುದನ್ನು ಆ ಬೆಳಕಿನಲ್ಲಿ ಅವಲೋಕಿಸಬೇಕು; ಇಲ್ಲಾ ಅವರಿಗೆ ಮುಕ್ತಿ ಕೊಟ್ಟು ಇನ್ನೇನಾದರೂ ಪರ‍್ಯಾಯ ವ್ಯವಸ್ಥೆ ಮಾಡಬೇಕೇ ಎನ್ನವುದನ್ನೂ ಆ ಮಠಾಧಿಪತಿ ಸಮೂಹವೇ ನಿರ್ಧರಿಸುವುದು ಸಾಧುವಾಗುತ್ತದೆಯೇ ಹೊರತು ಶಿಷ್ಯವೃಂದವೆಂದುಕೊಂಡ ಅಮೂರ್ತ ಸಂಘಟನೆಯಲ್ಲ!